ಚುರುಮುರಿ: ಬೆಂಗಳೂರು ಸಾಮ್ರಾಜ್ಯ
‘ಬೆಂಗಳೂರು ಸಾಮ್ರಾಜ್ಯ ಇನ್ನಷ್ಟು ವಿಸ್ತರಣೆ ಆಗುತ್ತೇನ್ರೀ?’ ಸುಮಿ ಕೇಳಿದಳು.
‘ರಾಮನಗರ ಜಿಲ್ಲೆಯು ಬೆಂಗಳೂರು ದಕ್ಷಿಣ ಜಿಲ್ಲೆ ಯಾಗಿದೆ. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯೆಂದು ಹೆಸರು ಬದಲಾಯಿಸ್ತಾರಂತೆ’ ಅಂದ ಶಂಕ್ರಿ.
ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರನ್ನು ಬೆಂಗಳೂರು ಹೆಸರಿನ ಜಿಲ್ಲೆ ಎಂದು ಮರುನಾಮಕರಣ ಮಾಡೋದಿಲ್ವಾ?’
‘ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ನೈರುತ್ಯ, ವಾಯವ್ಯ ಅಂತ ಸರ್ವ ದಿಕ್ಕಿನಲ್ಲೂ ಬೆಂಗಳೂರು ಹೆಸರು ಬೆಳೆಸಬಹುದು’.
‘ಇರುವ ಎಂಟು ದಿಕ್ಕನ್ನು ಎಂಟು ಜಿಲ್ಲೆಗೆ ಇಟ್ಟರೆ ಉಳಿದ ಜಿಲ್ಲೆಗಳ ಪಾಡೇನು?
‘ಉಳಿದ ಜಿಲ್ಲೆಗಳ ಹೆಸರನ್ನು ಬೆಂಗಳೂರು 1, 2, 3, 4... ಎಂದು ಬದಲಾಯಿಸಿದರಾಯ್ತು’.
‘ಹಿಂದೆ ರಾಜಮಹಾರಾಜರು ಯುದ್ಧದಲ್ಲಿ ಸೋತ ರಾಜ್ಯಗಳನ್ನು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದರಲ್ಲ, ಹಾಗೆ ಅಕ್ಕಪಕ್ಕದ ಜಿಲ್ಲೆಗಳನ್ನು ಬೆಂಗಳೂರು ಆಕ್ರಮಿಸಿಕೊಂಡು ಬ್ರಾಡ್ ಬೆಂಗಳೂರು ಆಗುತ್ತದೆ’.
‘ಇದರ ಬದಲು ರಾಜ್ಯವನ್ನೇ ಬೆಂಗಳೂರು ಸಾಮ್ರಾಜ್ಯವೆಂದು ಹೆಸರು ಬದಲಾಯಿಸಿಬಿಡಬೇಕು’.
‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು, ಹೃದಯವಾಯಿತು ಬೆಂಗಳೂರು ನಾಡು...’ ಎಂದು ಹಾಡಬಹುದು.
‘ವಿದೇಶಿ ಮಟ್ಟದಲ್ಲಿ ಹೇಳಹೆಸರಿಲ್ಲದ ಜಿಲ್ಲೆಗಳಿಗೆ ಬೆಂಗಳೂರು ಲೇಬಲ್ ಅಂಟಿಸಿದರೆ ಕಿಮ್ಮತ್ತು ಬರುವುದಂತೆ. ವಿದೇಶಿ ಉದ್ದಿಮೆದಾರರು ಬಂಡವಾಳ ಹೂಡಿ ಅಭಿವೃದ್ಧಿಗೆ ನೆರವಾದರೆ ಬಡ ಜಿಲ್ಲೆಗಳ ಅಭ್ಯುದಯ ವಾಗುವುದಂತೆ’.
‘ಹೆಸರು ಬದಲಾಯಿಸಿದರೆ ಜಿಲ್ಲೆಗಳ ಅಸ್ಮಿತೆ ನಾಶ ಮಾಡಿದಂತಾಗುವುದಿಲ್ಲವೆ?’
‘ಯಾವುದು ನಾಶವಾಗುತ್ತದೆ ಎನ್ನುವುದಕ್ಕಿಂಥಾ ಎಷ್ಟು ಲಾಭ ಆಗುತ್ತದೆ ಎನ್ನುವುದು ಕೆಲವರಿಗೆ ಮುಖ್ಯ...’ ಎಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.