ರಾಜ ವಿಕ್ರಮಾದಿತ್ಯನು ಉಸ್ಸೆಂದು ವಿಧಾನಸೌಧದ ಮುಂದೆ ಕುಕ್ಕರಿಸಿದನು.
‘ಇದ್ಯಾಕಾ ವಿಕ್ರಮಣೈ, ಹಿಂಗೆ ಬೇಜಾರಲ್ಲಿ ಕುಂತುದಯ್?’ ಪಟ್ಟಂತ ಪ್ರತ್ಯಕ್ಷವಾದ ಬೇತಾಳನ ಭಾವಣಿಕೆ ಮಾತಿನಿಂದ ರಾಜಾ ವಿಕ್ರಮಾದಿತ್ಯನು ಕಣ್ಣಾಗೆ ನೀರಾಕ್ಕ್ಯಂದು, ‘ಸಿಟಿ ಬಸ್ಸಿಗೆ ಹತ್ತಂಗೇ ಇಲ್ಲ ಕಪ್ಪಾ. ಆಟೋದೋರು ಬರಕ್ಕುಲ್ಲ, ಬೈಕ್ ಟ್ಯಾಕ್ಸಿ ಇಲ್ಲ, ಕ್ಯಾಬು ಸಿಕ್ಕಲ್ಲ. ನಡೀಲಾರದೇ ಕುಂತುದನಿ’ ಅಂತಂದ.
‘ರಾಜನ್, ನಿಂದೇನೋ ಸಮಸ್ಯೆ ಅದೆ. ಅದುಕ್ಕೇ ನೀನು ಮೌನ ಮುರಿದುಬುಟ್ಟೆ. ಲೀಗಲ್ಲಾಗಿ ನಾನೀಗ ಮಾಯವಾಗಬಕು. ಯೆದುರ್ಕಬ್ಯಾಡ, ನಿನ್ನ ಸಮಸ್ಯೆ ತೀರಿಸಿಯೇ ನಾನು ಹೋತಿನಿ’. ಬೇತಾಳ ವಿಕ್ರಮಾದಿತ್ಯನ ಮಗ್ಗುಲಲ್ಲಿ ಕುತುಗಂದು, ‘ರಾಜನ್, ನೀನು ಸರ್ಕಾರಕ್ಕೆ ಒಂದು ಅರ್ಜಿ ಕೊಟ್ಟು ರೋಡೆಲ್ಲಾ ಈಥರಕೀಥರಾ ಅಗ್ಯವೆ ಅಂತ ಹೇಳು’ ಅಂತು.
‘ಹೇಳಿದೆ ಕಯ್ಯಾ, ನಿನ್ನ ದೊಡ್ಡಸ್ತಿಕೆ ತೋರಬ್ಯಾಡ ಅಂತ ಮಕ್ಕುಗಿದ್ರು. ನಿಂದೇನು ಸಮಾಚಾರ ಹೇಳು?’ ಎಂದು ವಿಕ್ರಮಾದಿತ್ಯ ಕೇಳಿದ.
‘ರಾಜನ್, ನನಗೂ ಸಿಎಂ ಆಗಬೇಕು ಮನಸ್ಸಾಗ್ಯದೆ. ಮೊದಲು ಅಭ್ಯಾಸ ಮಾಡಿಕ್ಯಣಕ್ಕೆ ಬೆಂಗಳೂರು ರೌಂಡ್ ಹಾಕಕ್ಕೆ ಹೊಂಟಿವ್ನಿ. ರೋಡು ಅವ್ವೆವಸ್ಥೆ ನೋಡಿಕ್ಯಬತ್ತೀನಿ’ ಎಂದು ಬೇತಾಳ ಭರವಸೆ ಕೊಟ್ಟಿತು.
‘ಆತು ಕಯ್ಯಾ ನೀನು ಗೆದ್ದೆ ಅಂದ್ಕಳನ. ಶಾಸಕರ ಬಹುಮತ ಯಂಗೆ ತಕ್ಕಂದೀಯೆ?’ ಎಂದು ವಿಕ್ರಮಾದಿತ್ಯ
ಕೇಳಿದ.
‘ನಾವು ಸತ್ತೋದ ಪ್ರಜೆಗಳು ರಾಜನ್. ಮಡಿದಂತೆ ನಡೀತೀವಿ. ಹಫ್ತಾ ಕಾಸು, ಕಂಟ್ರಾಕ್ಟು, ಅನುದಾನ ಎಲ್ಲಾ ನಮಗ್ಯಾಕೆ. ಶಾಸಕರನ್ನ ಮೊದಲೇ ಬುಕಿಂಗ್ ಮಾಡಿಕ್ಯಂದಿರೋ ಸ್ಪಾನ್ಸರ್ರೇ ಎಲ್ಲಾ ಇಸುಗೋಯ್ತರೆ. ಅವರು ಹೇಳಿದ ಕಡೆ ಸೈನಿಕ್ಕಬೇಕು ಅಷ್ಟೇಯೆ. ನನಗೇಂತ ಮಶಾಣದೇಲಿ ಒಂದು ಲೈಫ್ ಲೂಸರ್ ಸೈಟು ಈಸುಗಂದು ಭೂತ ಬಂಗ್ಲೆ ಮಾಡಿಕ್ಯತೀನಿ. ಅಗೋ ಯಾರೋ ಸ್ಪಾನ್ಸರ್ ಪೋನು ಮಾಡ್ತಾವ್ರೆ. ಈಗ ಮೀಟಿಂಗ್ ಅದೆ. ನೀನು ನಡಿ. ನಾನು ಸಿಎಂ ಆದ ಮ್ಯಾಲೆ ಬಾ’ ಅಂತಂದ ಬೇತಾಳ ಪಣ್ಣನೆ ಮಾಯವಾಯ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.