‘ಗುರೂಜಿ, ಸುಖ, ಶಾಂತಿ, ನೆಮ್ಮದಿ ಇಲ್ಲ...’ ಸುಮಿ ಸಂಕಟ ಹೇಳಿಕೊಂಡಳು.
‘ಯಾಕಮ್ಮಾ, ಗಂಡ–ಹೆಂಡ್ತಿ ನಡುವೆ ಹೊಂದಾಣಿಕೆ ಇಲ್ವೇ?’ ಗುರೂಜಿ ಕೇಳಿದರು.
‘ಹೊಂದಾಣಿಕೆಯ ಸಮಸ್ಯೆ ನಮ್ಮದಲ್ಲ ಗುರೂಜಿ, ನಮ್ಮನ್ನಾಳುವ ಆಡಳಿತ ಪಕ್ಷ, ವಿಪಕ್ಷದವರ ನಡುವೆ ಹೊಂದಾಣಿಕೆ, ವಿಶ್ವಾಸವಿಲ್ಲ. ದಿನಬೆಳಗಾದರೆ ಬೈದಾಟ, ಕಿತ್ತಾಟ, ಜಗಳ, ರಗಳೆ ಮಾಡಿಕೊಂಡು ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಪ್ರಭುಗಳು ಕ್ಷೇಮವಾಗಿದ್ದರಲ್ಲವೆ ಪ್ರಜೆಗಳು ಸೌಖ್ಯದಿಂದಿರಲು ಸಾಧ್ಯ?’ ಅಂದ ಶಂಕ್ರಿ.
‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಆಳುವ, ಕೇಳುವ ಪಕ್ಷಗಳ ಜಗಳದಲ್ಲಿ ಪ್ರಜೆಗಳು ಫಜೀತಿ ಪಡುತ್ತಿದ್ದಾರೆ’.
‘ಧರ್ಮಸ್ಥಳದ ಕೇಸು, ದಸರಾ ವಿವಾದ, ಗಣೇಶೋತ್ಸವ ಗಲಾಟೆ ಮುಂದಿಟ್ಟುಕೊಂಡು ರಗಳೆ ಮಾಡ್ತಿದ್ದಾರೆ. ಇವು ಮುಗಿದ ಮೇಲೆ ಇನ್ನೊಂದು ಇಶ್ಯೂ ಹಿಡಿದು ಜಗಳಕ್ಕಿಳಿಯುತ್ತಾರೆ. ಪ್ರಜೆಗಳ ಕಷ್ಟ ಕೇಳೋದನ್ನೇ ಮರೆತಿದ್ದಾರೆ’.
‘ತೆರಿಗೆ, ದಂಡ ಹಾಕೋದನ್ನು ಮಾತ್ರ ಮರೆತಿಲ್ಲ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ನಮಗೆ ದಂಡ ಹಾಕುವಂತೆ, ರಸ್ತೆ ಗುಂಡಿ ಮುಚ್ಚದ ಸರ್ಕಾರಕ್ಕೂ ದಂಡ ಹಾಕಬೇಕಲ್ವೆ ಗುರೂಜಿ?’
‘ದೊರೆ ಮಾಡುವುದಕ್ಕೆ ದಂಡ ಇಲ್ಲ’ ನಕ್ಕರು ಗುರೂಜಿ.
‘ಸಾಮಾನ್ಯ ಪ್ರಜೆಗಳು ಜೀವನ ನಡೆಸೋದು ಕಷ್ಟವಾಗಿದೆ. ಬೆಲೆ ಏರಿಕೆ ಬರೆ, ತೆರಿಗೆ ಹೊರೆ ನಿಭಾಯಿಸಲಾಗದೆ ಪ್ರಜೆಗಳು ಕಣ್ಣು–ಬಾಯಿ ಬಿಡುತ್ತಿದ್ದಾರೆ’.
‘ಪ್ರಜೆಗಳ ಕಷ್ಟ ಪರಿಹಾರದ ಕಡೆ ಪ್ರಭುಗಳು ಗಮನ ಹರಿಸಬೇಕು. ಆಡಳಿತ, ವಿಪಕ್ಷದವರು ಶಾಂತಿ, ಸಹನೆ, ಸಹಿಷ್ಣುತೆಯಿಂದ ಬಾಳಲು ನಾವು ಯಾವುದಾದರೂ ಪೂಜೆ, ಹೋಮ ಮಾಡಿಸಬೇಕಾ?’
‘ಆಡಳಿತ, ವಿಪಕ್ಷಗಳು ಅತ್ತೆ–ಸೊಸೆ ಇದ್ದಂತೆ. ಅವು ಜಗಳ ಆಡಿಕೊಂಡೇ ಇರಬೇಕು... ಅವರು ಹೊಂದಾಣಿಕೆ ಮಾಡಿಕೊಂಡರೆ ಪ್ರಜೆಗಳಿಗೆ ಪ್ರಾಬ್ಲಂ ಜಾಸ್ತಿ!’
‘ಹಾಗಾದ್ರೆ ನಾವು ಏನು ಮಾಡಬೇಕು?’
‘ಸರ್ಕಾರ ನಂಬಿಕೊಳ್ಳದೆ ಸಂಸಾರ ನಡೆಸುವ ಜಾಣತನ ಕಲಿಯಬೇಕು...’ ಗುರೂಜಿ ಇನ್ನೊಮ್ಮೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.