ಚುರುಮುರಿ
ಟಿ.ವಿ. ವಾಹಿನಿಯವರೊಬ್ಬರು ಬೆಕ್ಕಣ್ಣನ ಸಂದರ್ಶನ ಮಾಡುವುದಾಗಿ ಹೇಳಿದ್ದರು. ಬೆಕ್ಕಣ್ಣ ಖುಷಿಯಿಂದ ‘ನನಗೆ ಒಂದು ಸೂಟ್ ಹೊಲೆಸಿಕೊಡು, ಟಿ.ವಿಯೊಳಗೆ ಛಂದ ಕಾಣಬಕು’ ಎಂದು ವರಾತ ಹಚ್ಚಿತು. ‘ಅವರು ಸಂದರ್ಶನ ಮಾಡತಾರೆ... ಪ್ರಿವೆಡ್ಡಿಂಗ್ ಶೂಟ್ ಮಾಡಾಕೆಹತ್ತಿಲ್ಲ! ನಿನಗೆ ಸೂಟ್ ಎದಕ್ಕೆ? ಅಗದಿ ಇನ್ಫಾರ್ಮಲ್ ಆಗಿರಬಕು’ ಎಂದು ಬೈಯ್ದೆ.
‘ಯಾರೂ ನಿನ್ ಸಂದರ್ಶನ ಮಾಡಲ್ಲ ಅಂತ ನಿನಗೆ ಹೊಟ್ಟೆಕಿಚ್ಚು. ಒಂದೊಳ್ಳೆ ಕೋಟಾದ್ರೂ ಕೊಡಿಸು’ ಎಂದು ಬೇಡಿತು. ಕೋಟ್ ಹಾಕಿ ಕೊಂಡು ಭಲೇ ಜರ್ಬಾಗಿ ಸಂದರ್ಶನಕ್ಕೆ ಕೂತಿತು.
‘ನಮಸ್ಕಾರ್ರೀ ಬೆಕ್ಕಣ್ಣನವರ್. ಮತ್ತ ಪ್ರಾಣಿಗಳಿಗೆ, ಮನುಷ್ಯಾರಿಗೆ ಏನು ವ್ಯತ್ಯಾಸ ಅದರೀ?’ ಸಂದರ್ಶಕಿ ಕೇಳಿದಳು.
‘ನಾವು ನಿಮ್ಮಂಗೆ ಮೂರು– ನಾಕು ತಲೆಮಾರಿಗೆ ಆಸ್ತಿ ಮಾಡಿಡಂಗಿಲ್ಲ. ಭ್ರಷ್ಟಾಚಾರ, ಕೊಲೆ, ಸುಲಗಿ ಇಂಥಾವೆಲ್ಲ ಮಾಡಂಗಿಲ್ಲ’.
‘ಮನುಷ್ಯಾರ ಮ್ಯಾಲೆ ಅಟ್ಯಾಕ್ ಮಾಡೂದು, ಬೆಳಿ ಹಾಳಮಾಡೂದೆಲ್ಲ ಕ್ರೂರ ಅಲ್ಲೇನು?’
‘ಪಶುಸ್ವಭಾವ ಅನ್ನೂದು ನಿಮ್ಮ ವ್ಯಾಖ್ಯಾನ, ಆದರ ಅದು ನಿಸರ್ಗಸಹಜರೀ. ನಮ್ಮ ಕಾಡು ನಮಗೆ ಬಿಟ್ಟರೆ, ನಮ್ಮಷ್ಟಕ್ಕೆ ನಾವಿರತೀವಿ. ಮನುಷ್ಯರ ಕ್ರೂರ ಸ್ವಭಾವವನ್ನು ಪಶುಸ್ವಭಾವ ಅನ್ನಬ್ಯಾಡರಿ’ ಬೆಕ್ಕಣ್ಣ ಗುರುಗುಟ್ಟಿತು.
‘ನಿಮ್ಮ ಪ್ರಾಣಿ ಸಾಮ್ರಾಜ್ಯದೊಳಗೂ ಅತ್ಯಾಚಾರ ಹಿಂಥಾವು ನಡೀತಾವೇನು?’
‘ಅವೆಲ್ಲ ಮನುಷ್ಯ ಸಾಮ್ರಾಜ್ಯದೊಳಗೆ ಮಾತ್ರ! ಗಂಡುಪ್ರಾಣಿಗಳು ನಿಸರ್ಗಸಹಜ ಸ್ವಭಾವ ಬಿಟ್ಟರೆ, ಹೆಣ್ಣುಪ್ರಾಣಿಗಳ ಜೊತೆ ವಿಕೃತವಾಗಿ ನಡಕೊಳಂಗಿಲ್ಲ’.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಮುಗಿದರೂ ಹೆಣ್ಮಕ್ಕಳು ನಡುರಾತ್ರಿ ನಿರ್ಭಯ
ವಾಗಿ ಓಡಾಡೂ ಹಂಗಿಲ್ಲ. ನೀವೇನಂತೀರಿ?’
‘ಸ್ವಾತಂತ್ರ್ಯ ಬಂದಿದ್ದು ದೇಶಕ್ಕೆ. ದೇಶ ಅಂದರೆ ಹೆಣ್ಮಕ್ಕಳು ಅಲ್ಲ, ಬರೇ ಗಂಡ್ಮಕ್ಕಳು! ಸಂಜಿಯಾತು, ನೀ ಲಗೂನೆ ಮನಿ ಸೇರವ್ವಾ, ಬಾರ್, ಪಬ್ ಅಂತೆಲ್ಲ ಅಲೀಬ್ಯಾಡ. ಹೆಣ್ಮಕ್ಕಳು ಸ್ವತಃ ರಿಸ್ಕಿನೊಳಗೆ ಸಿಕ್ಕೋಬಾರದು’.
ಬೆಕ್ಕಣ್ಣ ಯುವ ಸಂದರ್ಶಕಿಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.