ಚುರುಮುರಿ
ಪುರಾಣ ಕಾಲದಲ್ಲಿ ಭೋಜರಾಜ ಮತ್ತು ಅವನ ವಂಶದ ರಾಜರು ಭಾರತ ದೇಶವನ್ನು ಆಳುತ್ತಿದ್ದರು. ಅವರಿಗೆ ಸತ್ಯ, ನ್ಯಾಯ, ನಿಷ್ಠೆ, ಧರ್ಮ, ನೀತಿ, ನಿಯಮ ಅಂತ ಮಂತ್ರಿಗಳಿದ್ದರು. ಅವರು ರಾಜ ಕೊಡುತ್ತಿದ್ದ ಸಂಬಳದಲ್ಲೇ ಜೀವನ ನಡೆಸುತ್ತಿದ್ದರು. ರಾಜ ಮತ್ತು ಮಂತ್ರಿಗಳು ಜನಕ್ಕೆ ಒಳ್ಳೇದಾಗಲಿ ಅಂತ ಹಗಲು-ರಾತ್ರಿ ದುಡಿಯುತ್ತಾ ಅರವತ್ತರ ನಂತರ ವಾನಪ್ರಸ್ಥಕ್ಕೆ ತೆರಳುತ್ತಿದ್ದರು. ಪ್ರಜೆಗಳಿಗೆ ಮೋಸ, ಸುಳ್ಳು-ತಟವಟ ಗೊತ್ತೇ ಇರಲಿಲ್ಲ. ಹಾಗಾಗಿ, ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಾ ರಾಜನಿಗೆ ತೆರಿಗೆ ಕೊಡುತ್ತಾ ಸುಖವಾಗಿದ್ದರು. ದೇವ ದೇವತೆಗಳೆಲ್ಲಾ ಖುಷಿಯಿಂದ ಭೂಮಿಗೆ ಬಂದು ತೆರಳುತ್ತಿದ್ದರು.
ಬಹಳ ಕಾಲದ ನಂತರ ಜೋಬುರಾಜನ ವಂಶ ಆಳ್ವಿಕೆ ಆರಂಭವಾಯಿತು. ರಾಜ– ಮಂತ್ರಿಗಳು ಇನ್ನೂ ಅದೆಷ್ಟು ಕಾಲ ದೇಶಕ್ಕೆಂತಲೇ ನಿಯತ್ತಿನಿಂದ ದುಡಿಯುವುದು ಅಂತ ಸ್ವಲ್ಪಮಟ್ಟಿಗೆ ಸ್ವಾಹಾಪ್ರಿಯರಾದರು. ಇವರಿಗೆ ತಮ್ಮ ಜೋಬು ತುಂಬಿಸಿಕೊಳ್ಳುವುದೇ ಗುರಿಯಾಗಿತ್ತು. ಹಾಗಾಗಿ ರಾಜ–ಮಂತ್ರಿಗಳ ಜೋಬು ನಿಧಾನವಾಗಿ ತುಂಬಲಾರಂಭಿಸಿತು. ಇವರ ಕೈಕಸುಬನ್ನು ನೋಡಿ ಅಧಿಕಾರಿಗಳೂ ಕಾಸಿಗಾಗಿ ಹೋರಾಟ ಆರಂಭಿಸಿದರು. ದೇಶವು ಅನೀತಿ, ಅಧರ್ಮ, ಅನ್ಯಾಯದ ಕಡೆಗೆ ಹೊರಳುತ್ತಿದೆ ಎಂದು ಧರ್ಮಾತ್ಮರು ದುಃಖಿಸಲಾರಂಭಿಸಿದರು.
ಶತಮಾನಗಳ ನಂತರ ರಾಬುರಾಜನ ಆಳ್ವಿಕೆ ಆರಂಭವಾಗಿತ್ತು. ರಾಜಕಾರಣ, ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಬರಿ ಮಾಡುವುದೇ ಗುರಿಯಾಗಿದ್ದ ಈತನಿಗೆ ಅಸತ್ಯ, ಹಿಂಸೆ, ಅನ್ಯಾಯ, ಅನೀತಿ, ಅಧರ್ಮರೆಂಬ ಮಂತ್ರಿಗಳು ಇದ್ದರು. ಇವರು ಕೂಡ ರಾಜನಿಗೆ ಕಾಣದಂತೆ ಕಾಸು ದೋಚಲಾರಂಭಿಸಿದ್ದರು. ಜನರ ಕಿವಿಗೆ ಹೂವಿಡಲು ಆಗಾಗ್ಗೆ ಬೆಲೆಗಳನ್ನು ನೂರು ರೂಪಾಯಿ ಇಳಿಸಿ ನಂತರ ಇನ್ನೂರು ರೂಪಾಯಿ ಏರಿಸಲಾಗು
ತ್ತಿತ್ತು. ಅನೇಕ ಭಾಗ್ಯ, ಯೋಜನೆಗಳ ದುಡ್ಡನ್ನು ಜನರಿಂದಲೇ ವಸೂಲು ಮಾಡುತ್ತಿದ್ದರು. ವರ್ಗಾವಣೆಗೆ ಕಾಸು, ಕಚೇರಿಗಳಲ್ಲಿ ಕೆಲಸ ಮಾಡಿ ಕೊಡಲು ಲಂಚ ಕಾನೂನುಬದ್ಧವಾಯಿತು. ದೇವರಭಯ ಕಾಣೆಯಾಯ್ತು! ತಮ್ಮನ್ನೂ ಬೀದಿ ಯಲ್ಲಿ ಮಾರಾಟಕ್ಕಿಟ್ಟದ್ದನ್ನು ಕಂಡು ಬೆದರಿದ ದೇವತೆಗಳು ಭೂಮಿಗೆ ಬರುವುದನ್ನೇ ಬಿಟ್ಟರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.