ಚುರುಮುರಿ: ನ್ಯಾಯ ಪಂಚಾತ್ಕೆ
‘ಭಾರತದೋರು ಬಲೆ ಹೆಚ್ಚಿಕ್ಯಬುಟ್ಟವ್ರೆ ಕನೋ ಪುಟ್ಟಿನ ಬಾಮೈದ. ಮೊನ್ನೆ ನೀನೇ ಕಂಡಲ್ಲ, ನಾನೇ ಯುದ್ಧ ನಿಲ್ಲಿಸಿದ್ದು ಅಂದುದ್ಕೆ ನನ್ನೇ ಬೋದು ಕೆಡಗಿಬುಟ್ರಲ್ಲ’ ಟ್ರಂಪಣ್ಣ ನ್ಯಾಯ ಸುರು ಮಾಡಿದ.
‘ನೋಡು ಟ್ರಂಪಣ್ಣ ಮಾವ, ಭಾರತದೋರು ನಮ್ಮ ಕಳ್ಳು–ಬಳ್ಳಿ ಇದ್ದಂಗೆ ಕನಾ. ಕಷ್ಟ ಕಾಲದಾಗೆ ನಮ್ಮ ತಾವು ಪೆಟ್ರೋಲು, ಇಮಾನ ಖರೂದಿ ಮಾಡಿ ಆತುಗಂಡವರೆ. ಅವರಿಗೆ ಎರಡು ಬಗೆದ್ರೆ ದೇವರು ಮೆಚ್ಚಾನೇ. ನೀನು ಉಕ್ರೇನಿಗೆ, ಪಾಕಿಗೆ ಇಮಾನ, ಮಿಸೈಲು ಕೊಟ್ಟು ಸಾಕ್ಕೊಂಡಿಲ್ವೇ?’ ಪುಟ್ಟಿನಣ್ಣ ತಲೆ ಒಗೆದ.
‘ಲೇ ದಡ್ಡಾ, ಚೀನದೋನ್ನ ನೋಡಿ ಚಮಕಾಯಿಸದೆಂಗೆ ಅಂತ ಕಲೀಲಾ. ನೀನು ಯಾಕೆ ಉಕ್ರೇನ್ ಮ್ಯಾಲೆ ಕವ್ಕಂದು ಬಿದ್ದಿದ್ದೀಯ? ಯುದ್ಧ ನಿಲ್ಲಿಸಿ ಒಂದಾಗಿರಿ’ ಟ್ರಂಪಣ್ಣ ಸಿಟ್ಟಾದ.
‘ನಿನ್ನ ಮಾತು ಕೇಳಿ ಹಂಗೆಲ್ಲ ಮಾಡಿಕ್ಕೇ ಆಗ್ಕುಲ್ಲ ಮಾವ. ನೀನೇನೊ ನೊಬೆಲ್ ಬರಲಿ ಅಂತ ವರಸೆ ತೆಗುದಿದ್ದೀಯ. ಭಾರತದೋರು ನಿನಗೆ ಚೆನ್ನಾಗಿ ಅಂದು ಕಳಿಸಿದ್ರೂ ಬುದ್ಧಿ ಬಂದುಲ್ಲ. ಮೊದಲು ಉಕ್ರೇನಿನೋರಿಗೆ ದುಡ್ಡು–ಕಾಸು ಕೊಡದು ನಿಲ್ಸು. ಆಮೇಲೆ ನೋಡನೆ’ ಪುಟ್ಟಿನಣ್ಣ ಮಕ್ಕುಗಿದ.
‘ಲೇ ಬಾಮೈದ ಬ್ಯಾಡ ಕಲಾ. ನಾವು ನಾವು ಆತುಗಂಡು ಗಟ್ಟಿಯಾಗಿರಬೇಕು ಕಲಾ. ನೋಡು ಬಾಮೈದ, ನಮಗೂ ನಿಮಗೂ ಹತ್ತಿದ್ದು ಹರಿಯದಿದ್ರೂ ನಿಮ್ಮ ತಾವೇ ರೇರ್ ಅರ್ತ್ ಮಟೀರಿಯಲ್ ತಕ್ಕತಿದ್ದೀವಲ್ವಾ? ನಾನು–ನೀವು ಒಂದೇ ತಾಯಿ ಮಕ್ಕಳಿದ್ದಂಗಿರನ. ಏನಂತೀಯ?’ ಅಂದ ಟ್ರಂಪಣ್ಣ.
‘ನೀನು ಬುಡು ಮಾವ, ಸದರ ಕೊಟ್ರೆ ಪದರಕ್ಕೆ ಕೈ ಮಡಗ್ತೀಯ. ಬಾ ಈಗ ವೋಗನ’ ಅಂದ ಪುಟ್ಟಿನಣ್ಣ–ಟ್ರಂಪಣ್ಣ ಜಂಟಿ ಹೇಳಿಕೆ ಕೊಟ್ಟರು: ‘ನಮ್ಮ ನಡುವಿನ ಮಾತುಕತೆಯಲ್ಲಿ ಎಲ್ಲಾ ಸಮಸ್ಯೆ ಪರಿಹಾರಾಯ್ತದೆ. ನಾವು ಇನ್ನು ಮ್ಯಾಲೆ ಒಂದಾಗಿ ಬಾಳತೀವಿ’ ಅಂದು ಇಬ್ಬರೂ ಕೈ ಮುಗಿದರು.
ಈ ನಾಟಕ ಕಂಡು ಜಗತ್ತಿನ ಜನರೆಲ್ಲಾ ಗೊಳ್ ಅಂತ ನಕ್ಕಿದ್ದು ಅವರಿಗೆ ಗೊತ್ತಾಗಲೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.