ಮಳೆ ಅವಾಂತರದಲ್ಲಿ ಜನ ನೆಂದು ನೊಂದಿದ್ದರು. ಸಂತ್ರಸ್ತರ ಸಂಕಟ ಆಲಿಸಲು ಬಂದ ಶಾಸಕರು, ಹಾನಿಯ ಪರಿಹಾರಕ್ಕೆ ಸರ್ಕಾರದಿಂದ ‘ಮಳೆ ಬಿಲ್ಲು’ ಕೊಡಿಸುವ ಭರವಸೆ ನೀಡಿದರು.
‘ಸಾರ್, ಮನೆಗೆ ಮಳೆನೀರು ನುಗ್ಗಿ ಫಜೀತಿಯಾಗಿದೆ...’ ಜನ ದುಃಖ ಹೇಳಿಕೊಂಡರು.
‘ನಾವು ಸಪ್ಲೈ ಮಾಡೊ ನೀರಿಗೆ ವಾಟರ್ ಟ್ಯಾಕ್ಸ್ ಕಟ್ಟಬೇಕು, ಮಳೆನೀರು ಬಂದರೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ’ ಎಂದು ಜೋಕ್ ಮಾಡಿದ ಶಾಸಕರು, ‘ತಗ್ಗಿನಲ್ಲಿ ಮನೆ ಕಟ್ಟಿಕೊಂಡರೆ ನೀರು ನುಗ್ಗದೇ ಇರುತ್ತೇನ್ರೀ?’ ಎಂದರು.
ಈ ವೇಳೆ ಶಾಸಕರು ರಸ್ತೆ ಗುಂಡಿ ಮುಚ್ಚುವ, ಚರಂಡಿ ಕ್ಲೀನ್ ಮಾಡುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
‘ಉಯ್ಯೋ ಮಳೆಯಲ್ಲಿ ಗುಂಡಿ ಮುಚ್ಚಿದರೆ ಬಾಳಿಕೆ ಬರುತ್ತಾ?’ ಜನ ಕೇಳಿದರು.
‘ಇಂಜಿನಿಯರ್ಗಳಿಗಿಂಥ ಹೆಚ್ಚಿನ ಜ್ಞಾನ ಐತೇನ್ರೀ ನಿಮಗೆ?’ ಸಣ್ಣದಾಗಿ ರೇಗಿ ದೊಡ್ಡದಾಗಿ ನಕ್ಕರು. ‘ಗುಂಡಿ ಮುಚ್ಚುವ ಕಾಮಗಾರಿ ಬಿಲ್ ಅನ್ನು ಬೇಗ ಕೊಡುಸ್ತೀನಿ’ ಅಂದಾಗ ಎಂಜಿನಿಯರ್, ಗುತ್ತಿಗೆದಾರರು ಆನಂದವಾಗಿ ನಕ್ಕರು.
‘ಮರದ ಕೊಂಬೆ ಬಿದ್ದು ಕಾರು ಜಖಂ ಆಗಿದೆ. ಕಾಂಪೌಂಡ್ ಕುಸಿದಿದೆ. ಸರ್ಕಾರದಿಂದ ಪರಿಹಾರ ಕೊಡಿಸಿ’ ಮಲ್ಲೇಶಿಯ ಮನವಿ.
‘ಕಾರನ್ನು ಶೆಡ್ನಲ್ಲಿ ನಿಲ್ಲಿಸಬೇಕು, ರಸ್ತೆಯಲ್ಲಿ ನಿಲ್ಲಿಸಿದ್ದು ನಿಮ್ಮ ತಪ್ಪು’.
‘ಡಬಲ್ ಬೆಡ್ರೂಂ ಸೈಜಿನ ಶೆಡ್ ಜಾಗದಲ್ಲಿ ಸಿಂಗಲ್ ಬೆಡ್ ರೂಂ ಕಟ್ಟಿ ಬಾಡಿಗೆಗೆ ಕೊಟ್ಟಿದ್ದೇನೆ ಸಾರ್...’
‘ಮಳೆಯಲ್ಲಿ ನೆಂದ ಮಗಳಿಗೆ ಜ್ವರ ಬಂದಿದೆ. ಕೆಸರಿನಲ್ಲಿ ಜಾರಿಬಿದ್ದು ಹೆಂಡ್ತಿ ಸೊಂಟ ಮುರಿದುಕೊಂಡಿದ್ದಾಳೆ. ಸರ್ಕಾರದಿಂದ ಚಿಕಿತ್ಸೆ ಬಾಬ್ತಿನ ‘ಮಳೆ ಬಿಲ್ಲು’ ಕೊಡಿಸಿ ಸಾರ್’ ಮೂರ್ತಿ ಕೇಳ್ಕೊಂಡ.
‘ಮನೆ ಸೋರಿದರೆ, ಹೆಂಡ್ತಿ ಜಾರಿದರೆ ಸರ್ಕಾರ ರಿಪೇರಿ ಖರ್ಚು ಕೊಡಲ್ಲ...’ ಎಂದು ರೇಗುತ್ತಾ ಶಾಸಕರು ಕಾರು ಹತ್ತಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.