ADVERTISEMENT

ಅಭಿವೃದ್ಧಿ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 19:30 IST
Last Updated 14 ಫೆಬ್ರುವರಿ 2014, 19:30 IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2014–15ನೇ ಸಾಲಿನ ಪೂರ್ಣ ಪ್ರಮಾಣದ ರಾಜ್ಯ ಮುಂಗಡ ಪತ್ರದಲ್ಲಿ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಇಲ್ಲದಿ­ರುವುದು ಅಚ್ಚರಿ­ ಮೂಡಿಸದು.   ಕೃಷಿ, ಗ್ರಾಮೀಣಾ­ಭಿವೃದ್ಧಿ ಸೇರಿದಂತೆ ಶಿಕ್ಷಣ, ಆರೋಗ್ಯ ಮತ್ತು ಮೂಲ­ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಮೂಲಕ ಮುಖ್ಯಮಂತ್ರಿಗಳು  ಜಾಣ್ಮೆ ಮೆರೆ­ದಿದ್ದಾರೆ. ಆದರೆ, ಒಟ್ಟಾರೆ ಅರ್ಥ ವ್ಯವಸ್ಥೆಯಲ್ಲಿ ಕೈಗಾರಿಕಾ ವಲಯಕ್ಕೆ ಸೂಕ್ತ ಆದ್ಯತೆ ನೀಡದಿರುವುದರಿಂದ ಸಮತೋಲನ ತಪ್ಪಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಕಾರಣ ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ‘ಜನಪ್ರಿಯ’ ಹಾದಿ ತುಳಿದಿದ್ದಾರೆ.

ಮತದಾರರನ್ನು ಸಂಪ್ರೀತ­ಗೊಳಿ­ಸಲು ಸಾಕಷ್ಟು ಕಸರತ್ತು ಮಾಡಿರು­ವುದು ಕಂಡುಬರುತ್ತದೆ. ಜನ­ಸಾಮಾನ್ಯ­ರಷ್ಟೇ ಅಲ್ಲದೇ ವಣಿಕ ಸಮುದಾಯಕ್ಕೂ ವಾಣಿಜ್ಯ ತೆರಿಗೆ ಹೊರೆಯಿಂದ ವಿನಾಯ್ತಿ ನೀಡಲಾಗಿದೆ. ಭತ್ತ, ಅಕ್ಕಿ, ಗೋಧಿ, ಬೇಳೆಕಾಳು ಮತ್ತು ಅವುಗಳ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರೆಸಲಾಗಿದೆ. ಜೊತೆಗೆ  ‘ಭಾಗ್ಯ’ ಯೋಜನೆಗಳ ಪಟ್ಟಿಯಲ್ಲಿ ಈಗ ಕೃಷಿ ಹಾಗೂ ಗೃಹ ಸೇರ್ಪಡೆಯಾಗಿವೆ.

ರೈತರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿ­ಕೊಳ್ಳುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಲು ಯತ್ನಿಸಿರು­ವುದು ಸ್ವಾಗತಾರ್ಹ. ಲೋಕಸಭಾ ಚುನಾ­ವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದಲೇ ಮುಸ್ಲಿಮರು, ಕ್ರೈಸ್ತರಿಗಾಗಿ ಹೆಚ್ಚು­ವರಿ ಅನುದಾನ ನೀಡಿರುವುದು ಸ್ಪಷ್ಟ­ಗೊಳ್ಳುತ್ತದೆ. ಬೆಂಗಳೂರಿನ ಮೂಲ ಸೌಕರ್ಯ­ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಒತ್ತು ನೀಡಿದ್ದರೂ, ರಾಜ್ಯದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡುವ ರಾಜಧಾನಿಗೆ ನಿಗದಿ ಮಾಡಿರುವ ಅನುದಾನ ಸಾಲದು.

ಬಿಯರ್‌ ಮತ್ತು ದೇಶಿ ಮದ್ಯದ  ಮೇಲಿನ ಅಬಕಾರಿ ಸುಂಕ ಮತ್ತು ಮದ್ಯ ತಯಾರಿಕಾ ಘಟಕಗಳ ಮೇಲಿನ ತೆರಿಗೆ  ಏರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮಾರಾಟವಾಗುವ ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪ್ರಮಾಣ ಕಡಿಮೆ ಮಾಡುವ ಮೂಲಕ ಗರಿಷ್ಠ ಪ್ರಮಾಣದ ‘ವ್ಯಾಟ್‌’ ಸಂಗ್ರಹದ ಮೂಲಕವೂ ವರಮಾನ ಹೆಚ್ಚಿಸಿ­ಕೊಳ್ಳಲು ಉದ್ದೇಶಿಸಿದ್ದಾರೆ. ಈ ಕ್ರಮ­ಗಳು ಬೊಕ್ಕಸ­ವನ್ನು ನಿರೀಕ್ಷಿತ ಪ್ರಮಾಣ­ದಲ್ಲಿ ಭರ್ತಿ ಮಾಡಲಾರವು.

ರಾಜ್ಯದ ಅರ್ಥವ್ಯವಸ್ಥೆಯನ್ನು ಗರಿಷ್ಠ  ಬೆಳವ­ಣಿಗೆಯ ಪಥದತ್ತ ಕೊಂಡೊ­ಯ್ಯಲು ಕ್ರಮ ಕೈಗೊಂಡಿರುವುದಾಗಿ ಬಜೆಟ್‌ನಲ್ಲಿ ಪುನರುಚ್ಚರಿಸಿದ್ದರೂ, ಅಂತಹ ಲಕ್ಷಣ­ಗಳೇನೂ ಕಾಣುತ್ತಿಲ್ಲ. ರಾಜ್ಯದ ಹಣಕಾಸು ಸ್ಥಿತಿಗತಿ ತೃಪ್ತಿ­ದಾಯಕ­ವಾಗಿಲ್ಲ ಎಂದು ಹೇಳಿಕೊಂಡಿದ್ದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ‘ಆರ್ಥಿಕ ಆರೋಗ್ಯ’ ಸುಧಾರಣೆಗೆ ಅಗತ್ಯವಾದ ಗಮನ ಹರಿಸದಿರುವುದು ವಿಷಾದನೀಯ.

ಹೆಚ್ಚುವರಿ ಸಬ್ಸಿಡಿ ಹೊರೆಯ ಫಲವಾಗಿ ಅಸಮತೋಲನ ಉಂಟಾಗಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದ್ದರೂ, ಅದಕ್ಕೆ ಕಿವಿಗೊಡದಿರುವುದು ಜಾಣತನ­ವಲ್ಲ. ಜನಸಾಮಾನ್ಯರ ಮೇಲೆ ಹೊರೆ­ಯಾಗ­­­ದಂತೆಯೂ ವರಮಾನ ಹೆಚ್ಚಿಸಿ­ಕೊಳ್ಳಲು ಇತರ ಅನೇಕ ಮಾರ್ಗೋ­ಪಾಯಗಳಿದ್ದರೂ ಅವುಗಳ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚು ತಲೆಕೆಡಿಸಿ­ಕೊಂಡಂತೆ ಕಾಣುವುದಿಲ್ಲ.

ವರಮಾನ ಸಂಗ್ರಹ ಗುರಿಯನ್ನು ಪ್ರಸಕ್ತ ಸಾಲಿನ ರೂ. 37,740 ಕೋಟಿ­ಗಳಿಂದ ರೂ. 42,000 ಕೋಟಿಗಳಿಗೆ ನಿಗದಿ ಮಾಡ­ಲಾಗಿದೆ. ವಿತ್ತೀಯ ಕೊರತೆ, ಒಟ್ಟು ಸಾಲ ಮತ್ತಿತರ ಆಯ­ವ್ಯಯ ಮಾನದಂಡ­ಗಳು ‘ರಾಜ್ಯ ವಿತ್ತೀಯ ಹೊಣೆಗಾರಿಕೆ ಕಾಯ್ದೆ’ ವ್ಯಾಪ್ತಿ ಒಳಗೆ ಇರುವುದು ಸಮಾ­ಧಾನಕರ ಸಂಗತಿ. ಆದರೆ, ಯೋಜನಾ ವೆಚ್ಚಕ್ಕಿಂತ ಯೋಜನೇತರ ವೆಚ್ಚಗಳೇ ಹೆಚ್ಚಾಗಿ ರಾಜ್ಯ ಸರ್ಕಾರ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿ­ಕೊಳ್ಳುವ ಅಪಾಯ ತಳ್ಳಿ ಹಾಕುವಂತಿಲ್ಲ.  ಒಟ್ಟಾರೆ ಬಜೆಟ್‌ ಆಶಯದಲ್ಲಿ ಅಭಿವೃದ್ಧಿ ಕಡೆಗಣನೆಗೆ ಗುರಿಯಾಗಿರುವುದು ಮಾತ್ರ ಸಮರ್ಥ­ನೀಯವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT