ಏಷ್ಯಾದ ದೇಶಗಳೆಲ್ಲಾ ಒಂದು ಕುಟುಂಬ ಎಂಬ ಭಾವ ಸಂಭ್ರಮದೊಂದಿಗೆ ನಡೆದ ಹದಿನೇಳನೇ ಏಷ್ಯನ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಈ ಕ್ರೀಡಾ ಮಹಾಹಬ್ಬದಲ್ಲಿ ಒಂಬತ್ತು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಸತ್ವ ಪರೀಕ್ಷೆ ನಡೆಸಿದರು. ಚೀನಾ ತಾನೇ ಹಿರಿಯಣ್ಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಅದು ಗೆದ್ದ 151 ಚಿನ್ನದ ಪದಕಗಳನ್ನು ಗಮನಿಸಿದಾಗ ಆ ದೇಶ ಕ್ರೀಡೆಗೆ ನೀಡುವ ಉತ್ತೇಜನ ಇತರ ದೇಶಗಳಿಗೆ ಮಾದರಿ ಎನಿಸುವಂತಿದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲೇಬೇಕಾದ ಅಗತ್ಯವನ್ನು ಚೀನಾ ಕಂಡುಕೊಂಡಿದೆ. ದಕ್ಷಿಣ ಕೊರಿಯ ಕೂಡಾ ಇದೇ ಆಶಯದ ದಿಕ್ಕಿನಲ್ಲಿ ದಾಪುಗಾಲು ಇರಿಸಿದೆ. ಕೊರಿಯ ಈ ಕೂಟವನ್ನು ಇಂಚೆನ್ನಲ್ಲಿ ಅಚ್ಚುಕಟ್ಟಾಗಿ ಸಂಘಟಿಸಿ ಏಷ್ಯಾ ಸಮುದಾಯದ ಮನ ಗೆದ್ದಿದೆ.
ಉದ್ದೀಪನಾ ಮದ್ದು ಸೇವನೆಯ ಪ್ರಕರಣಗಳು ತೀರಾ ಕಡಿಮೆಯಾಗಿರುವುದು ಈ ಭೂಖಂಡದ ಮಂದಿ ಹೆಮ್ಮೆ ಪಡುವಂತಹದ್ದೇ ಆಗಿದೆ. ಚೀನಾ, ಜಪಾನ್, ಕೊರಿಯ ದೇಶಗಳು ಕೆಲವು ದಶಕಗಳಿಂದ ಏಷ್ಯಾ ಕ್ರೀಡಾ ಶಕ್ತಿ ಕೇಂದ್ರಗಳಾಗಿವೆ. ಇರಾನ್ ಮತ್ತು ಕಜಕಸ್ತಾನಗಳೂ ಈಚೆಗೆ ಅತ್ಯುತ್ತಮ ಸಾಮರ್ಥ್ಯ ತೋರಿರುವುದು ಶ್ಲಾಘನಾರ್ಹ. ಆದರೆ ಭಾರತ ಇಲ್ಲಿ 11 ಚಿನ್ನವೂ ಸೇರಿದಂತೆ 57 ಪದಕಗಳನ್ನು ಗಳಿಸಿದೆ. ಇದು ಕಳೆದ ಏಷ್ಯನ್ ಕೂಟದ ಸಾಧನೆಗೆ ಹೋಲಿಸಿದರೆ ಕಡಿಮೆಯೇ. ಆದರೆ ನಮ್ಮ ಕೆಲವು ಕ್ರೀಡಾಪಟುಗಳು ತಮ್ಮ ಅಪೂರ್ವ ಸಾಧನೆಗಳೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಇದು ಖುಷಿ ಕೊಡುವಂತಹದ್ದು.
ಹಾಕಿಯಲ್ಲಿ ಭಾರತ ಗಮನಾರ್ಹ ಸಾಮರ್ಥ್ಯ ಪ್ರದರ್ಶಿಸಿದೆ. ಏಷ್ಯನ್ ಕೂಟದಲ್ಲಿ 16 ವರ್ಷಗಳ ನಂತರ ಹಾಕಿ ಚಿನ್ನ ನಮಗೆ ಬಂದಿದೆ.
ಯೋಗೇಶ್ವರ ದತ್ ಕುಸ್ತಿಯಲ್ಲಿ 28 ವರ್ಷಗಳ ಚಿನ್ನದ ಬರವನ್ನು ನೀಗಿಸಿದರು. ಮೇರಿಕೋಮ್ ಬಾಕ್ಸಿಂಗ್ನಲ್ಲಿ ಗೆದ್ದ ಬಂಗಾರ ಯುವಜನರಿಗೆ ಸ್ಫೂರ್ತಿಯ ಚೇತನದಂತಿದೆ. ರಿಲೆ ಓಟದಲ್ಲಿ ಭಾರತೀಯ ವನಿತೆಯರು ತಮ್ಮ ಚಿನ್ನದ ಅನನ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಸ್ಕ್ವಾಷ್ನಲ್ಲಿ ಬಂದ ಪದಕಗಳು ಅನಿರೀಕ್ಷಿತ.
ಮುಂದಿನ ದಿನಗಳಲ್ಲಿ ಇದೇ ಕ್ರೀಡೆಯಲ್ಲಿ ನಾವು ಒಲಿಂಪಿಕ್ಸ್ ಎತ್ತರದಲ್ಲಿಯೂ ಮಿಂಚಬಹುದು ಎಂಬ ಆತ್ಮವಿಶ್ವಾಸವನ್ನು ದೀಪಿಕಾ ಪಳ್ಳಿಕಲ್, ಜೋಶ್ನಾ, ಸೌರವ್ ಘೋಷಾಲ್ ನೀಡಿದ್ದಾರೆ. ಕಬಡ್ಡಿಯಲ್ಲಿ ನಿರೀಕ್ಷಿತ ಸಾಧನೆ ಮೂಡಿ ಬಂದಿದೆ. ಆದರೆ ಇರಾನ್ನಂತಹ ದೇಶಗಳು ಮುಂದಿನ ದಿನಗಳಲ್ಲಿ ನಮ್ಮ ಕಬಡ್ಡಿಯ ಏಕಸ್ವಾಮ್ಯಕ್ಕೆ ಧಕ್ಕೆ ತರುವ ಸೂಚನೆಗಳೂ ಸಿಕ್ಕಿವೆ. ಶೂಟಿಂಗ್ನಲ್ಲಿ ಪದಕಗಳು ಬಂದಿವೆಯಾದರೂ, ತೃಪ್ತಿಕರವಲ್ಲ. ಆದರೆ ಜಿತು ರಾಯ್ದು ಅದ್ಭುತ ಸಾಧನೆ.
ಬ್ಯಾಡ್ಮಿಂಟನ್ ತಂಡದ ಮೇಲಿಟ್ಟಿದ್ದ ಅಪಾರ ಭರವಸೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಕ್ರೀಡಾಪಟುಗಳು ತಪ್ಪುಗಳನ್ನು ತಿದ್ದಿಕೊಂಡು ಇನ್ನೂ ಎತ್ತರಕ್ಕೆ ಏರುವ ನಿಟ್ಟಿನಲ್ಲಿ ಈ ಕೂಟ ಪಾಠವನ್ನೂ ಕಲಿಸಿದೆ. ದೇಶದ ಮೂಲೆ ಮೂಲೆಯಲ್ಲೂ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭೆಗಳಿಗೆ ನೀರೆರೆಯಬೇಕು. ಕ್ರೀಡೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು, ಅದು ಮನರಂಜನೆಗೆ ಸೀಮಿತ ಎಂಬ ಧೋರಣೆ ಬದಲಾಗಬೇಕು. ರಾಜಕಾರಣಿಗಳು ಕ್ರೀಡೆಯನ್ನು ಬೆಳೆಸುವ ಬದಲು ತಮ್ಮ ಬೆಳವಣಿಗೆಗೆ ಅದನ್ನು ಬಳಸಿಕೊಳ್ಳುವ ಪರಿಪಾಠ ನಿಲ್ಲಬೇಕು. ಆಗ ಪದಕ ಪಟ್ಟಿಯಲ್ಲಿ ಮತ್ತಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.