ADVERTISEMENT

ದೇಶದ ಹಿತಾಸಕ್ತಿಗೆ ಸುಷ್ಮಾ ಕ್ರಮ ಪೂರಕವಾಗಿಲ್ಲ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 19:30 IST
Last Updated 15 ಜೂನ್ 2015, 19:30 IST

ಬೆಟ್ಟಿಂಗ್‌ ಮತ್ತು  ಮ್ಯಾಚ್‌ಫಿಕ್ಸಿಂಗ್‌ ಹಿನ್ನೆಲೆಯಲ್ಲಿ ಕುಖ್ಯಾತಿ ಪಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹಗರಣದ ಪ್ರಮುಖ ಆರೋಪಿ, ಉದ್ಯಮಿ ಲಲಿತ್‌ ಮೋದಿ ಭಾರತ ಬಿಟ್ಟು ಐದು ವರ್ಷಗಳಾಗಿವೆ. 2009ರಲ್ಲಿ ದಕ್ಷಿಣ  ಆಫ್ರಿಕಾದಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿದೇಶ ವಿನಿಮಯ ನಿಯಮಗಳನ್ನು ಉಲ್ಲಂಘಿಸಿ ಕೋಟ್ಯಂತರ ಡಾಲರ್‌ಗಳ ಅಕ್ರಮ ನಡೆಸಿರುವ ಆರೋಪದಲ್ಲಿ ಐಪಿಎಲ್‌ ಸ್ಥಾಪಕ ಆಯುಕ್ತರೂ ಆಗಿರುವ ಲಲಿತ್‌ ಮೋದಿಯ ಬಂಧನವನ್ನು ಭಾರತ ಸರ್ಕಾರ ಎದುರು ನೋಡುತ್ತಿದೆ.

2010ರಲ್ಲೇ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದಿಂದ ಎಲ್ಲ ಭಾರತೀಯ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆಯ ನೋಟಿಸ್‌ ಕಳುಹಿಸಿದ್ದು, ಲಲಿತ್‌ ಮೋದಿಯನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಅದೇ ವರ್ಷ ಲಲಿತ್‌ ಮೋದಿಯ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಲು ವಿದೇಶಾಂಗ ವ್ಯವಹಾರ ಇಲಾಖೆಗೆ ಸೂಚನೆ ನೀಡಲಾಗಿದೆ. ಸದ್ಯ ಬ್ರಿಟನ್ನಿನಲ್ಲಿರುವ ಲಲಿತ್‌ ಮೋದಿ ಅಲ್ಲಿಂದೀಚೆಗೆ ಭಾರತಕ್ಕೆ ಕಾಲಿಟ್ಟಿಲ್ಲ. ಇಲ್ಲಿಗೆ ಬಂದಿಳಿದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ಬಂಧಿಸಬೇಕಾಗುತ್ತದೆ.

ದೇಶದ ಕಾನೂನಿಗೆ ಬೇಕಾಗಿರುವ ಇಂತಹ ವ್ಯಕ್ತಿಗೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾದ ಸುಷ್ಮಾ ಸ್ವರಾಜ್‌ ಅವರೇ ಪೋರ್ಚುಗಲ್‌ಗೆ ಪ್ರಯಾಣಿಸಲು ಪ್ರವಾಸ ದಾಖಲೆಗಳನ್ನು ಒದಗಿಸಲು ನೆರವಾಗುತ್ತಾರೆ. ಬ್ರಿಟನ್ನಿನ ಅಧಿಕಾರಿಗಳಿಗೆ ಈ ಸಂಬಂಧ ಶಿಫಾರಸು ಪತ್ರ ಕಳುಹಿಸುತ್ತಾರೆ. ಈ ಕುರಿತ ದಾಖಲೆಗಳು ಈಗ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗವಾದಾಗ, ‘ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತ್ನಿಗೆ ಪೋರ್ಚುಗಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸುವ ಪತ್ರಕ್ಕೆ ಸಹಿ ಹಾಕಲು ಲಲಿತ್‌ ಮೋದಿ ಅಲ್ಲಿಗೆ ಪ್ರಯಾಣಿಸಬೇಕಿತ್ತು.

ಕೇವಲ  ಮಾನವೀಯತೆಯ ಆಧಾರದಲ್ಲಿ ಲಲಿತ್‌ ಮೋದಿಗೆ ನೆರವು ನೀಡಿದ್ದೇನೆ, ಇದರಲ್ಲಿ ತಪ್ಪೇನಿಲ್ಲ’ ಎಂದು ಸಚಿವೆ ಸುಷ್ಮಾ  ಸಮರ್ಥನೆ ಮಾಡಿಕೊಂಡಿದ್ದಾರೆ. ಎನ್‌ಡಿಎ ಸರ್ಕಾರ ಮತ್ತು ಬಿಜೆಪಿ ಪಕ್ಷವೂ ಅವರ ಬೆಂಬಲಕ್ಕೆ ನಿಂತಿದೆ. ಕ್ರಿಮಿನಲ್‌ ಆರೋಪಗಳ ಹಿನ್ನೆಲೆಯಲ್ಲಿ ದೇಶ ತ್ಯಜಿಸಿ, ತನಿಖೆಗಾಗಿ ಭಾರತಕ್ಕೆ ಬರದೆ ವಿದೇಶದಲ್ಲೇ ಓಡಾಡಿಕೊಂಡಿರುವ ವ್ಯಕ್ತಿಗೆ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವೆಯೇ ಮುಂದೆ ನಿಂತು ನೆರವು ನೀಡುವುದು ನೈತಿಕವಾಗಿ ಎಷ್ಟು ಸರಿ?

ಎನ್‌ಡಿಎ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವೆಯಾಗಿರುವ ಸುಷ್ಮಾ ಅವರು, ಕ್ರಿಮಿನಲ್‌ ಆರೋಪಿಗೆ  ನೆರವಾದ ವಿವಾದದಲ್ಲಿ ರಾಜೀನಾಮೆ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದು ಸರಿಯಾಗಿಯೇ ಇದೆ. ‘ಕೇವಲ ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದೇನೆ; ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ’ ಎಂಬ ಸಚಿವೆಯ ಹೇಳಿಕೆ ಅತ್ಯಂತ ದುರ್ಬಲವಾಗಿದೆ. ಲಭ್ಯವಿರುವ ದಾಖಲೆಗಳ ಪ್ರಕಾರ, ಸುಷ್ಮಾ ಅವರ ಮಗಳು ಬಾನ್ಸುರಿ ಸ್ವರಾಜ್‌ರ ಹೆಸರು, ದೆಹಲಿ ಹೈಕೋರ್ಟಿನಲ್ಲಿ ಲಲಿತ್‌ ಮೋದಿ ಪರ ವಾದಿಸುವ ವಕೀಲರ ಪಟ್ಟಿಯಲ್ಲಿದೆ.

ಕಳೆದ 22 ವರ್ಷಗಳಿಂದಲೂ ಸುಷ್ಮಾ  ಅವರ ಪತಿ ಸ್ವರಾಜ್‌ ಕೌಶಲ್‌, ಲಲಿತ್‌ ಮೋದಿಗೆ ಕಾನೂನು ನೆರವು ನೀಡುತ್ತಿದ್ದಾರೆ. ಲಲಿತ್‌ ಮೋದಿಗೆ ಪೋರ್ಚುಗಲ್‌ ಪ್ರವಾಸಕ್ಕೆ ದಾಖಲೆಗಳನ್ನು ಒದಗಿಸಲು ನೆರವಾಗುವಂತೆ ಬ್ರಿಟನ್ನಿನ ಭಾರತ ಮೂಲದ ಸಂಸದ ಕೀತ್‌ ವಾಜ್‌ರಿಗೆ ಮತ್ತು ಬ್ರಿಟನ್‌ ಹೈಕಮಿಷನರ್‌ ಜೇಮ್ಸ್‌ ಬೆವನ್‌ರಿಗೆ ಸುಷ್ಮಾ ಸ್ವರಾಜ್‌ ಕಳುಹಿಸಿದ ಇ-ಮೇಲ್‌ ದಾಖಲೆಗಳಿವೆ. ಈ ಮಧ್ಯೆ ಬ್ರಿಟಿಷ್‌‌ಲಾ ಡಿಗ್ರಿ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಸುಷ್ಮಾರ ಸಹೋದರ ಸಂಬಂಧಿ ಜ್ಯೋತಿರ್ಮಯಿ‌ ಕೌಶಲ್‌ಗೆ ನೆರವಾಗುವುದಾಗಿಯೂ ಕೀತ್‌ ವಾಜ್‌ ಸಂದೇಶ ಕಳಿಸಿದ್ದಾರೆ.

ಇವೆಲ್ಲವನ್ನೂ ಗಮನಿಸಿದರೆ, ಲಲಿತ್‌ ಮೋದಿಗೆ ನೆರವಾದ ಪ್ರಕರಣದಲ್ಲಿ ಸಚಿವೆಯ ವೈಯಕ್ತಿಕ ಹಿತಾಸಕ್ತಿಗಳು ಅಡಗಿರುವ ಬಗ್ಗೆ ದಟ್ಟ ಅನುಮಾನಗಳು  ಏಳುತ್ತವೆ. ಈ ಪ್ರಕರಣದಲ್ಲಿ ಸಚಿವೆ ಸುಷ್ಮಾ ಕೈಗೊಂಡಿರುವ ಕ್ರಮಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎನ್ನುವುದಂತೂ ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಅನುಮಾನದ ಮುಳ್ಳುಗಳು ಅವರೆಡೆಗೇ ಬೊಟ್ಟು ಮಾಡುವ ಸಾಧ್ಯತೆಯಿದೆ. ಅಧಿಕಾರಕ್ಕೆ ಬಂದಾಗ ನರೇಂದ್ರ ಮೋದಿಯವರು, ‘ಭ್ರಷ್ಟಾಚಾರ ಮುಕ್ತ ಹಾಗೂ  ಪಾರದರ್ಶಕ ಆಡಳಿತ ನೀಡುತ್ತೇವೆ’ ಎಂದದ್ದು ಇಷ್ಟು ಬೇಗ ಮರೆತುಹೋಯಿತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT