ADVERTISEMENT

ಬದಲಾವಣೆಗಾಗಿ ಮತ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:30 IST
Last Updated 16 ಮೇ 2014, 19:30 IST

ಹದಿನಾರನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ­ಭೇರಿ ಬಾರಿಸಿದೆ. ಬಹುಮತಕ್ಕೆ ಅಗತ್ಯವಾದ 272ರ ಮಾಂತ್ರಿಕ ಸಂಖ್ಯೆ­ಯನ್ನೂ ದಾಟಿ  335ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪಷ್ಟ ಬಹುಮತದತ್ತ  ಹೊರ­ಳಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಇತಿಹಾಸ ಸೃಷ್ಟಿಸಿದೆ.  1984ರ ಲೋಕಸಭೆ ಚುನಾವಣೆಯ ನಂತರ ರಾಷ್ಟ್ರದಲ್ಲಿ ಇದ್ದದ್ದು ಸಮ್ಮಿಶ್ರ ಸರ್ಕಾ­­ರಗಳ ಯುಗ. ಈಗ ಇದೇ ಮೊದಲ ಬಾರಿಗೆ ಮೂರು ದಶಕಗಳ ನಂತರ ಸ್ಪಷ್ಟ ಬಹುಮತ ಗಳಿಸಿದ ಏಕೈಕ ಪಕ್ಷವಾಗಿ ಈ ಚುನಾವಣೆಯಲ್ಲಿ ಬಿಜೆಪಿ ಹೊರಹೊಮ್ಮಿರುವುದು ಹೊಸ ಸಾಧನೆ. ಪ್ರತಿ ಚುನಾವಣೆಯೂ ಸಾಮಾ­ನ್ಯವಾಗಿ ಹೊಸದೊಂದು ಅಚ್ಚರಿಯನ್ನು ಹೊರಹೊಮ್ಮಿಸುತ್ತದೆ.

ಈ ಚುನಾ­ವಣೆಯಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳ ನಿರೀಕ್ಷೆಗಳನ್ನೂ ಮೀರಿ  ಬಿಜೆಪಿ ನೇತೃತ್ವದ ಎನ್ ಡಿ ಎ ಭಾರತದಾದ್ಯಂತ ಸಾಧನೆ ಮೆರೆದಿದೆ. ಬಿಜೆಪಿ ಅಧಿ­ಕಾರದಲ್ಲಿರುವ ರಾಜ್ಯಗಳಲ್ಲಂತೂ ಬೇರೆ ಪಕ್ಷಗಳ ಸಾಧನೆ ಶೂನ್ಯ ಎನ್ನುವ ಸ್ಥಿತಿ ಇದೆ. ರಾಷ್ಟ್ರದ ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳಿಗೂ  ತನ್ನ ಸಾಧನೆ ವಿಸ್ತರಿಸಿಕೊಂಡಿರುವ ಮೋದಿ ಅಲೆ ಅಖಿಲ ಭಾರತ ಅಲೆಯಾಗಿ ರಾಷ್ಟ್ರವನ್ನಾವರಿಸಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ. ಈ ಅಲೆ­ಯಿಂದಾಗಿ ರಾಜ್ಯದಲ್ಲಿಯೂ ಬಿಜೆಪಿ 17 ಸ್ಥಾನಗಳನ್ನು ಗಳಿಸಿಕೊಂಡಿದೆ.  ಉತ್ತರ ಪ್ರದೇಶದಲ್ಲಂತೂ ಬಿಜೆಪಿಯದ್ದು ಮಹತ್ತರ ಸಾಧನೆ. ಅಲ್ಲಿ ಮಾಯಾವತಿ ನೇತೃತ್ವದ ಬಿಎಸ್ ಪಿ ಹೇಳಹೆಸರಿಲ್ಲದಂತಾಗಿರುವುದು ಮತ್ತೊಂದು ಅಚ್ಚರಿ. ಹಾಗೆಯೇ ತಮಿಳುನಾಡಿನಲ್ಲಿ ಡಿಎಂಕೆ ನೆಲ ಕಚ್ಚಿದೆ.

ಕೇಂದ್ರದ ಯುಪಿಎ ಸರ್ಕಾರದ ಘಟಾನುಘಟಿ ಸಚಿವರುಗಳ ಹೀನಾಯ ಸೋಲು­ಗಳಿಂದ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಎರಡಂಕಿ ಮಟ್ಟಕ್ಕೆ ಇಳಿದು ಭಾರಿ ಮುಖಭಂಗ ಅನುಭವಿಸಿದೆ. ಈ ಮೋದಿ ಅಲೆಯ ನಡುವೆಯೂ  ಪ್ರಬಲ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿ­ಯಾಗಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ ಸಂಗತಿ.    ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ, ಪಶ್ಚಿಮ ಬಂಗಾಳ­ದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹಾಗೂ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳದ ಸಾಧನೆ ಅಪೂರ್ವವಾದದ್ದು.

ಅತ್ಯಧಿಕ ಮತದಾನ ಕಂಡ ಈ ಚುನಾವಣೆಯಲ್ಲಿ ನರೇಂದ್ರ ಮೋದಿ­ಯವರ ಅಭಿವೃದ್ಧಿ ಮಂತ್ರ ಹಾಗೂ ಒಳ್ಳೆಯ ಆಡಳಿತದ ಭರವಸೆಗಳು  ಯುವ­ಮತದಾರರನ್ನು ಸೆಳೆದ ಕೇಂದ್ರಬಿಂದುಗಳಾಗಿದ್ದವು. ಆದರೆ 128 ವರ್ಷ­ಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಬದಲಾಗುತ್ತಿರುವ ಕಾಲದ ಅಗತ್ಯ­ಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಗ್ರಹಿಸಿಕೊಳ್ಳಲು ಸೋತಿರುವುದು ಸ್ಪಷ್ಟವಾಗಿದೆ. ವಂಶಾಡಳಿತ ನಾಯಕತ್ವದ ವೈಫಲ್ಯ, ಬದಲಾದ ಕಾಲಕ್ಕೆ ಸ್ಪಂದಿ­ಸುವ ರಾಜಕೀಯ ಪರಿಕಲ್ಪನೆಯ ಕೊರತೆ, ಹೊಸ ದೃಷ್ಟಿಕೋನಗಳಿಲ್ಲದ ಅಸ­ಮರ್ಪಕ ಆಡಳಿತ, ಸದಾ ಸುದ್ದಿಯಲ್ಲಿದ್ದ ಭ್ರಷ್ಟಾಚಾರ ಹಗರಣಗಳು ಹಾಗೂ ರಾಜಕೀಯ ಸಂವಹನ ಕೊರತೆಗಳು ಜನರ ಮನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಪ್ರಸ್ತುತವಾಗಿಸಿರುವುದು ಈ ಚುನಾವಣೆ ಫಲಿತಾಂಶಗಳಲ್ಲಿ ದೊಡ್ಡ­ದಾಗೇ ಗೋಚರವಾಗಿದೆ.

ಹಾಗೆಯೇ ಮೋದಿ ಅನುಸರಿಸಿದ ಅಧ್ಯ­ಕ್ಷೀಯ ಮಾದರಿಯ ಚುನಾವಣಾ ಪ್ರಚಾರಗಳು ಜನರಲ್ಲಿ ಅಪಾರ ಕನಸು­ಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿರುವುದೂ ಈ ಫಲಿತಾಂಶದಿಂದ ಸ್ಪಷ್ಟ. ಜಾತಿ, ಮತ, ಧರ್ಮ, ಸಮುದಾಯಗಳ ಗಡಿ ಮೀರಿ ಬದಲಾವಣೆ­ಗಾಗಿ ಸ್ಥಿರ ಸರ್ಕಾರ ರಚನೆಗೆ ಜನ ಮತ ಹಾಕಿದ್ದಾರೆ. ಈ ಸ್ಪಷ್ಟ ಜನಾದೇಶ­ವನ್ನು ಪಡೆದುಕೊಂಡಿರುವ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಜವಾ­ಬ್ದಾರಿ ಇದೆ. ಜನರು ತೋರಿರುವ ಈ ಅಪಾರ ವಿಶ್ವಾಸಕ್ಕೆ ಸ್ಪಂದಿಸಿ ಅವರ ಆಶಯ, ಕನಸುಗಳನ್ನು ಸಾಕಾರಗೊಳಿಸುವಂತಹ ರಾಜಕೀಯದ ಹೊಸ  ಪರಿಭಾಷೆ­ಯನ್ನು ರೂಪಿಸುವ ಸವಾಲು ಮೋದಿ ಅವರಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.