ADVERTISEMENT

ಮುಕ್ತ ಅಭಿವ್ಯಕ್ತಿಗೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2014, 19:30 IST
Last Updated 13 ಫೆಬ್ರುವರಿ 2014, 19:30 IST

ವೆಂಡಿ ಡೊನಿಗರ್ ಅವರ  ‘ದಿ ಹಿಂದೂಸ್: ಆ್ಯನ್ ಆಲ್ಟರ್ ನೇಟಿವ್ ಹಿಸ್ಟರಿ’ ಪುಸ್ತಕದ ಎಲ್ಲಾ ಪ್ರತಿಗಳನ್ನು ಪೆಂಗ್ವಿನ್ ಪ್ರಕಾ­ಶನ ಸಂಸ್ಥೆ ವಾಪಸ್ ಪಡೆಯಲು ನಿರ್ಧರಿಸಿದೆ. ಈ ಕೃತಿ ಉದ್ದೇಶ­ಪೂರ್ವಕ­ವಾಗಿ ಹಿಂದೂಗಳ ಧಾರ್ಮಿ­ಕ ಭಾವನೆಗಳಿಗೆ ಧಕ್ಕೆ­ಯುಂಟು ಮಾಡಿದೆ ಎಂಬ ದೂರನ್ನು ದೆಹಲಿ ನ್ಯಾಯಾಲಯವೊಂದರಲ್ಲಿ ‘ಶಿಕ್ಷಾ ಬಚಾವೊ ಆಂದೋ­ಲನ’ ಎಂಬ ಹಿಂದೂ ಮೂಲಭೂತವಾದಿ ಗುಂಪೊಂದು ದಾಖಲಿಸಿತ್ತು. ದೂರು­ದಾರರ ಜೊತೆಗೆ ಕೋರ್ಟ್ ಹೊರಗೆ ಒಪ್ಪಂದ­­ವೊಂದನ್ನು ಮಾಡಿ­ಕೊಂಡಿರುವ ಪೆಂಗ್ವಿನ್ ಸಂಸ್ಥೆ ಪುಸ್ತಕಗಳನ್ನು ಹಿಂತೆಗೆ­ದುಕೊಂಡು ನಾಶಪಡಿ­ಸುವುದಾಗಿ ಹೇಳಿದೆ. ನಾಲ್ಕು ವರ್ಷಗಳಿಂದ ಈ ವಿವಾದ ಕೋರ್ಟ್‌ನಲ್ಲಿತ್ತು. ಆದರೆ ತೀರ್ಪು ಬರುವ ಮೊದಲೇ ಪೂರ್ಣ­ವಾಗಿ ಸೋಲೊ­ಪ್ಪಿ­ಕೊಂಡಿರುವ ಪೆಂಗ್ವಿನ್ ಕ್ರಮ, ಬೌದ್ಧಿಕ ವಲಯದ ಆಕ್ರೋಶಕ್ಕೆ ಕಾರಣವಾಗಿರುವುದು ಸಹಜ­­ವಾಗಿದೆ.

ಈ ವಿಚಾರ ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗಾದರೂ ಕಾಯ­ಬಹುದಿತ್ತು. ವಿರುದ್ಧದ ತೀರ್ಪು ಬಂದಿದ್ದಲ್ಲಿ ಉನ್ನತ ನ್ಯಾಯಾ­ಲಯ­ಗಳಿಗೆ ಪ್ರಕರಣವನ್ನು ಒಯ್ಯುವ ಅವಕಾಶ ಇದ್ದೇ ಇತ್ತು ಎಂಬಂತಹ ಭಾವನೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆ ಭಾರತದ ಉತ್ಕೃಷ್ಟವಾದ ಬಹುಸಂಸ್ಕೃತಿಯ ಉದಾರವಾದಿ ಪರಂಪರೆಗೆ ಆದ ಹಿನ್ನಡೆ ಎಂಬುದರಲ್ಲಿ ಎರಡು ಮಾತಿಲ್ಲ. ಕಲುಷಿತಗೊಳ್ಳುತ್ತಿರುವ ರಾಜಕೀಯ ವಾತಾವರಣದಲ್ಲಿ ಮುಕ್ತ ಅಭಿವ್ಯಕ್ತಿಗೆ ಒದಗುತ್ತಿರುವ ಗಂಡಾಂತರಗಳಿಗೆ ಇದು ಸೂಚಕ.

ಇಂತಹದೊಂದು ಅಸಹನೆಯ ಪರಂಪರೆ ಆರಂಭವಾದದ್ದು ಎಂಬತ್ತರ ದಶಕದಲ್ಲಿ. ಆಗ ಸಲ್ಮಾನ್ ರಷ್ದಿ ಅವರ ‘ಸಟಾನಿಕ್ ವರ್ಸಸ್’ ಪುಸ್ತಕವನ್ನು ರಾಜೀವ್ ಗಾಂಧಿ ಸರ್ಕಾರ ಬಹಿಷ್ಕರಿಸಿತ್ತು. ನಂತರದ ವರ್ಷಗಳಲ್ಲಿ ಹಲವು ಪುಸ್ತಕ­ಗಳು ಭಾರತದಲ್ಲಿ ನಿಷೇಧಕ್ಕೊಳಗಾಗಿವೆ. ಎ.ಕೆ. ರಾಮಾನುಜನ್ ಅವರ ‘ತ್ರೀ ಹಂಡ್ರೆಡ್ ರಾಮಾಯಣಾಸ್’ ಪ್ರಬಂಧ ಹಿಂತೆಗೆದುಕೊಳ್ಳುವ ಒತ್ತಡ­­ಗಳಿಗೆ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಮಣಿದಿತ್ತು. ಮಹಾ­ರಾಷ್ಟ್ರ ಸರ್ಕಾರ ಶಿವಾಜಿ ಕುರಿತ ಜೇಮ್ಸ್ ಲೈನ್ ಅವರ ಪುಸ್ತಕ ಬಹಿ­ಷ್ಕರಿಸಿತ್ತು. ಹಾಗೆಯೇ ಎನ್ ಸಿ ಇ ಆರ್ ಟಿ ಪಠ್ಯಪುಸ್ತಕಗಳಿಂದ ಬಿ. ಆರ್. ಅಂಬೇಡ್ಕರ್ ಅವರ ಕುರಿತಾದ ಕಾರ್ಟೂನ್ ಹಿಂತೆಗೆದುಕೊಳ್ಳುವ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದ್ದುದನ್ನು ಸ್ಮರಿಸಬಹುದು. ಮುಕ್ತ ಅಭಿವ್ಯಕ್ತಿಗೆ ಪ್ರತಿರೋಧದ ದನಿ­ಗಳು ರಾಜ್ಯದಲ್ಲೂ ಅನೇಕ ಪುಸ್ತಕಗಳನ್ನು ಕುರಿತಂತೆ ಎದ್ದಿವೆ.

ಭಾರತದ ರಾಜ­ಕಾರಣದಲ್ಲಿ ವಿವಿಧ ಸಮುದಾಯಗಳು, ಗುಂಪುಗಳ ಅಸ್ಮಿತೆ ರಾಜ­ಕೀಯ ಬಲ ಪಡೆದುಕೊಳ್ಳುತ್ತಿರುವಂತೆಯೇ ಸಂವೇದನೆಗಳು ಹೆಚ್ಚು ಹೆಚ್ಚು ಸೂಕ್ಷ್ಮವಾ­ಗುತ್ತಿವೆ. ಈ ಅಸಹನೆಯ ಶಕ್ತಿಗಳು ಮೇಲುಗೈ ಪಡೆಯುವುದು ಸಂವಿ­ಧಾನದ 19 (1) (ಎ) ವಿಧಿ ಅಡಿ ಮುಕ್ತ ಅಭಿವ್ಯಕ್ತಿ ರಕ್ಷಿಸುವ ಪ್ರಜಾ­ಸ­ತ್ತಾ­ತ್ಮಕ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು ಎಂಬುದನ್ನು ಗಮನಿಸಬೇಕು. ವಾಸ್ತ­ವ­ವಾಗಿ ವೆಂಡಿ ಡೊನಿಗರ್ ಅವರು ಹಿಂದೂ ಧರ್ಮದ ದೊಡ್ಡ ವಿದ್ವಾಂಸ­ರೆಂಬ ಖ್ಯಾತಿ ಪಡೆದಿದ್ದಾರೆ. 2009ರಲ್ಲಿ ಪ್ರಕಟವಾದ 800 ಪುಟ­ಗಳ ಅವರ ಪುಸ್ತಕ, ದಾಖಲಾದ ಇತಿಹಾಸ ಹಾಗೂ ಕಾಲ್ಪನಿಕ ವಿಶ್ವಗಳ ಮಧ್ಯದ ಕೊಂಡಿಯನ್ನು ನಿರೂಪಿಸಲು ಯತ್ನಿಸುತ್ತದೆ. ಸಂಶೋಧನೆ, ಅಧ್ಯ­ಯನ ನಡೆಸಿ ಬರೆದ ಒಳನೋಟಗಳ ಕೃತಿಗಳು ಮತಾಂಧ ಶಕ್ತಿಗಳ ಸಂಕುಚಿತ ಸಿದ್ಧಾಂತಗಳಿಗೆ ಆಹುತಿಯಾಗುವುದು ಸರ್ಕಾರಗಳ ದೌರ್ಬಲ್ಯಗಳನ್ನೂ ಬಿಂಬಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.