ಉಜ್ವಲ್ ಸಿ.ನಾಯ್ಡು, ಭಾರತದ ಜಿಮ್ನಾಸ್ಟ್
* ವಿಶ್ವಕಪ್ ಜಿಮ್ನಾಸ್ಟಿಕ್ಸ್ಗೆ ಆಯ್ಕೆಯಾದ ಕನ್ನಡಿಗ ನೀವು. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದ ದಕ್ಷಿಣ ಭಾರತದ ಮೊದಲ ಜಿಮ್ನಾಸ್ಟ್ ಕೂಡ. ಸಿದ್ಧತೆಗಳು ಹೇಗೆ ನಡೆದಿವೆ ಮತ್ತು ದೋಹಾ ವಿಶ್ವಕಪ್ನಲ್ಲಿ ಏನು ನಿರೀಕ್ಷೆ ಇದೆ?
ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿಲ್ಲ. ಇಂತಿಷ್ಟೇ ಗಳಿಸಬೇಕು, ದೊಡ್ಡ ಸಾಧನೆಯೇ ಆಗಬೇಕು ಎಂಬ ಧೋರಣೆಯೂ ಇಲ್ಲ. ಕಠಿಣ ಅಭ್ಯಾಸ ಮಾಡಿದ್ದೇನೆ. ಕಲಿತ ವಿದ್ಯೆಯನ್ನು ಸ್ಪರ್ಧಾಕಣದಲ್ಲಿ ಸಂಪೂರ್ಣವಾಗಿ ಪಣಕ್ಕಿಡುವುದು ನನ್ನ ಉದ್ದೇಶ. 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ಮುಖ್ಯ ಗುರಿ.
* ಎಲ್ಲ ವಿಭಾಗಗಳಲ್ಲೂ ಸಾಧನೆ ಮಾಡಿರುವವರು ನೀವು. ವಿಶ್ವಕಪ್ನಲ್ಲಿ ಫ್ಲೋರ್ ಮತ್ತು ವಾಲ್ಟ್ ವಿಭಾಗದಲ್ಲಿ ಮಾತ್ರ ಅವಕಾಶ ಲಭಿಸಿದೆ. ಇದರ ಬಗ್ಗೆ ಸ್ವಲ್ಪ ವಿವರಿಸುವಿರಾ?
ಫ್ಲೋರ್ ಎಕ್ಸೈಸ್ ಮತ್ತು ವಾಲ್ಟ್ ವಿಭಾಗದಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ಇತ್ತು. ಟ್ರಯಲ್ಸ್ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಅತಿ ಹೆಚ್ಚು ಸ್ಕೋರ್ ಮಾಡಿದ್ದೇನೆ. ಎರಡೂ ವಿಭಾಗಗಳಲ್ಲಿ ಆಯ್ಕೆಯಾಗಿದ್ದೇನೆ.
* ನಮ್ಮ ರಾಜ್ಯದಲ್ಲಿ ಜಿಮ್ನಾಸ್ಟಿಕ್ಸ್ ಹೆಚ್ಚು ಪ್ರಚಲಿತವಲ್ಲದ ಕ್ರೀಡೆ. ಇದಕ್ಕೆ ನಿಮ್ಮ ಪ್ರವೇಶ ಹೇಗಾಯ್ತು?
ನನ್ನ ರಕ್ತದಲ್ಲೇ ಇದು ಸೇರಿಕೊಂಡಿದೆ ಎಂದು ಹೇಳಬೇಕು. ತಂದೆ ಚಂದ್ರಶೇಖರ ಅವರು ಅಖಿಲ ಭಾರತ ಅಂತರ ವಿ.ವಿ. ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ನಲ್ಲಿ ಐದು ಬಾರಿ ಚಾಂಪಿಯನ್ ಆಗಿದ್ದರು. ಸಹೋದರ ಉದಯ್ ನಾಯ್ಡು ಕೂಡ ಇದೇ ಕ್ರೀಡೆಯಲ್ಲಿ ಬೆಳೆಯುತ್ತಿದ್ದಾನೆ.
* ಜಿಮ್ನಾಸ್ಟಿಕ್ಸ್ ಕ್ರೀಡೆಯನ್ನು ಜನಸ್ನೇಹಿಯಾಗಿಸಲು ಏನು ಮಾಡಬೇಕು? ಈ ಕ್ರೀಡೆಗೆ ಭವಿಷ್ಯ ಇದೆಯೇ?
ಶಾಲಾ ಪಠ್ಯದಲ್ಲಿ ಜಿಮ್ನಾಸ್ಟಿಕ್ಸ್ ಸೇರಿಸಬೇಕು. ಆಗ ಈ ಕ್ರೀಡೆಯ ಬಗ್ಗೆ ಪ್ರಚಾರ ಆಗಲಿದೆ. ಆಸಕ್ತಿ ಇರುವವರು ಆಯ್ಕೆ ಮಾಡಿಕೊಳ್ಳುವುದಕ್ಕೂ ಸಹಕಾರಿ ಆಗಬಹುದು. ಮುಂದಿನ ಪೀಳಿಗೆಗೆ ಇದನ್ನು ತಲುಪಿಸಿದರೆ ಭವಿಷ್ಯದಲ್ಲಿ ಉತ್ತಮ ಜಿಮ್ನಾಸ್ಟ್ಗಳು ಲಭಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.