ADVERTISEMENT

ನುಡಿ ಬೆಳಗು | ಸಂಗ್ರಹ ಸಂತೃಪ್ತಿಗೆ ಅನುಗುಣವಾಗಿರಬೇಕು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 1 ಏಪ್ರಿಲ್ 2025, 0:37 IST
Last Updated 1 ಏಪ್ರಿಲ್ 2025, 0:37 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ರಾಮ ಸೀತೆಯನ್ನು ಮದುವೆ ಮಾಡಿಕೊಂಡು ಅಯೋಧ್ಯೆಗೆ ಬಂದ. ಆಗ ದಶರಥ ರಾಮನಿಗೆ ‘ನೀನು ಕಾಡಿಗೆ ಹೋಗು’ ಎಂದ. ಆಗ ರಾಮ ಸೀತೆಗೆ ‘ನೀನು ಕಾಡಿಗೆ ಬರುವುದು ಬೇಡ. ಇಲ್ಲಿಯೇ ಆರಾಂ ಇರು’ ಎಂದ. ಆದರೆ ಅದಕ್ಕೆ ಸೀತೆ ಒಪ್ಪಿಕೊಳ್ಳಲಿಲ್ಲ. ‘ರಾಮನಿಲ್ಲದ ಅಯೋಧ್ಯೆ ಕಾಡಿಗೆ ಸಮ. ರಾಮನಿರುವ ಕಾಡು ಕೂಡಾ ಅಯೋಧ್ಯೆಗೆ ಸಮ. ಅದಕ್ಕೆ ನಾನು ನಿನ್ನ ಜೊತೆ ಬರ್ತೀನಿ’ ಎಂದಳು. ಗಂಡ ಕಷ್ಟದಲ್ಲಿ ಇರುವಾಗ ಅವನ ಜೊತೆಗೆ ಇರಬೇಕು ಎನ್ನುವುದು ಕೇವಲ ಬಯಕೆಯಲ್ಲ. ಅದು ವಿವೇಕ. ಮುಂದೆ ಕಾಡಿನಲ್ಲಿ ಒಂದು ಬಂಗಾರದ ಜಿಂಕೆ ಕಂಡಾಗ ಅದು ಬೇಕು ಎಂದು ಸೀತೆ ಹಟ ಹಿಡಿದಳು. ಅಯೋಧ್ಯೆಯಲ್ಲಿಯೇ ಇದ್ದಿದ್ದರೆ ಆಕೆಗೆ ಬಂಗಾರದ ಜಿಂಕೆಯನ್ನೇ ಕೊಡಬಹುದಿತ್ತು. ಆದರೆ ಸೀತೆ ಕಾಡಿನಲ್ಲಿ ಬಂಗಾರದ ಬಣ್ಣದ ಜಿಂಕೆಯನ್ನು ಬಯಸಿದಳು. ಇದರಿಂದ ಆಕೆ ಕಷ್ಟಕ್ಕೆ ಸಿಲುಕಿದಳು. ಅಯೋಧ್ಯೆಯಲ್ಲಿ ಇರುವಾಗ ಬೇಕು ಅನ್ನುವುದು ಸತ್ತಿತ್ತು. ವಿವೇಕ ಎಚ್ಚರವಾಗಿತ್ತು. ಕಾಡಿನಲ್ಲಿ ವಿವೇಕ ಸತ್ತಿತ್ತು. ಬೇಕು ಎನ್ನುವುದು ಎಚ್ಚರವಾಗಿತ್ತು. ಯಾವಾಗ ವಿವೇಕ ಎನ್ನುವುದು ಮರೆಯಾಗಿ ಬೇಕು ಎನ್ನುವುದು ಜಾಗೃತವಾಗುತ್ತದಲ್ಲ ಆಗ ನಾವು ಕಷ್ಟಕ್ಕೆ ಸಿಲುಕುತ್ತೇವೆ. ಬೇಕು ಎನ್ನುವುದು ವಿವೇಕಯುಕ್ತವಾಗಿರಬೇಕು ಎನ್ನುವುದು ಬಹಳ ಮುಖ್ಯ. ಇದನ್ನು ಮನುಷ್ಯ ತಿಳಿದುಕೊಳ್ಳಬೇಕು.

ರತನ್ ಟಾಟಾ ಬಹುದೊಡ್ಡ ಶ್ರೀಮಂತರು. ಅವರು ತಮ್ಮ ಆಸ್ತಿಯನ್ನು ವಿಲ್ ಮಾಡಿಟ್ಟಿದ್ದರು. ಅವರ ಮನೆಯ ನಾಯಿಗೂ ಆಸ್ತಿ ಇಟ್ಟಿದ್ದಾರೆ. ಒಂದು ಸಲ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ರತನ್ ಟಾಟಾ ಅವರನ್ನು ಭೇಟಿಯಾಗಿದ್ದಾಗ ‘ಟಾಟಾ ಅವರೇ ನೀವು ಇಷ್ಟೊಂದು ಆಸ್ತಿ ಮಾಡಿದ್ದೀರಲ್ಲ. ಅದು ಮುಂದೆ ಏನಾಗುತ್ತದೆ’ ಎಂದು ಕೇಳಿದರಂತೆ. ಅದಕ್ಕೆ ರತನ್ ಟಾಟಾ ‘ಭಾರತದ ಆರ್ಥಿಕತೆಗೆ ಅನುಕೂಲವಾಗುವುದಾದರೆ ನನ್ನ ಎಲ್ಲ ಆಸ್ತಿಯನ್ನೂ ದೇಶಕ್ಕೆ ಬರೆದುಕೊಡುತ್ತೇನೆ’ ಎಂದು ಉತ್ತರಿಸಿದರಂತೆ. ಇದು ಟಾಟಾ ಹೇಳಿದ ಪಾಠ. ಟಾಟಾ ನಮಗೆ ಕಲಿಸಿದ ಪಾಠ ಏನು ಅಂದರೆ, ನಾವು ಗಳಿಸಿದ ಸಂಪತ್ತನ್ನು ಸಮಾಜಕ್ಕೂ ಬಳಸಬೇಕು ಅನ್ನೋದು. ಸಂಗ್ರಹ ಮಾಡೋದಲ್ಲ. ಇದ್ದಿದ್ದರಲ್ಲಿ ಸಂತೋಷದಿಂದ ಬದುಕೋದನ್ನು ಕಲಿಯಬೇಕು ಮನುಷ್ಯ.

ADVERTISEMENT

ದೇವರು ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಸಂತೋಷ ಪಡೋದನ್ನು ಕಲಿಯಬೇಕು. ಸಂಗ್ರಹ ಮಾಡಿ ಬದುಕೋದಲ್ಲ. ಸಂತೋಷದಿಂದ ಬದುಕಬೇಕು. ಎಷ್ಟು ಗಳಿಸಿದರೂ ಅದರಲ್ಲಿ ಉಳಿಯುವುದು ಎಷ್ಟು ಎಂದು ಆಲೋಚಿಸಬೇಕು. ಜೀವ ಹೋದಮೇಲೆ ದೇಹ ಮಣ್ಣಿನ ಪಾಲಾಗುತ್ತದೆ. ತುತ್ತು ಕಾಗೆ ಪಾಲು. ಅಸ್ಥಿ ಗಂಗೆಯ ಪಾಲು. ಜೀವ ಪರಲೋಕದ ಪಾಲು. ನಾವು ಗಳಿಸಿದ ಆಸ್ತಿ ಮುಂದೆ ಕುಳಿತ ಅಳುವವರ ಪಾಲು. ನಮ್ಮ ಹಿಂದೆ ಏನೂ ಬರೋದಿಲ್ಲ. ನಮ್ಮ ಜೊತೆ ಬರುವುದು ನಾವು ಜೀವನದಲ್ಲಿ ಗಳಿಸಿದ ಒಳ್ಳೆಯ ಕಾರ್ಯಗಳ ಫಲ ಮಾತ್ರ. ನಾವು ಗಳಿಸಿದ ಆಸ್ತಿಗೆ ಮಕ್ಕಳು ಪಾಲು ಕೇಳುತ್ತಾರೆಯೇ ವಿನಾ ನಮ್ಮ ಪಾಪ ಪುಣ್ಯಕ್ಕೆ ಯಾರೂ ಪಾಲು ಕೇಳುವುದಿಲ್ಲ. ಅದಕ್ಕೆ ನಮಗೆ ಗೊತ್ತಿರಬೇಕು ನಾವು ಏನು ಗಳಿಸುತ್ತೇವೆ, ಸಂಗ್ರಹಿಸುತ್ತಿದ್ದೇವೆ ಅದು ಯಾವುದೂ ಅನ್ಯಾಯದಿಂದ ಬಂದಿದ್ದು ಆಗಿರಬಾರದು. ಸಂಗ್ರಹ ಬೇಡ. ಸಂತೃಪ್ತಿ ಬೇಕು. ಸಂಗ್ರಹ ಸಂತೃಪ್ತಿಗೆ ಅನುಗುಣವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.