ADVERTISEMENT

ನುಡಿ ಬೆಳಗು | ಮಣ್ಣಿನಿಂದ ಮಣ್ಣಿನೆಡೆಗೆ ಪಯಣ

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 11 ಮೇ 2025, 23:32 IST
Last Updated 11 ಮೇ 2025, 23:32 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಏಕಕೋಶ ಅಮೀಬಾದಿಂದ ಹಿಡಿದು ಡೈನೋಸಾರ್ಸ್‌ವರೆಗೆ, ಮಂಗನಿಂದ ಮಾನವನವರೆಗೆ ಸಕಲ ಚರಾಚರ ಜಗತ್ತು ಏನಿದೆ, ಎಲ್ಲವೂ ಮಣ್ಣಿನ ವಿಸ್ತಾರ. ಮಣ್ಣಿನ ವಿಸ್ತಾರವೇ ಜಗತ್ತು. ಜಗತ್ತಿನ ಸಂಕ್ಷಿಪ್ತ ರೂಪವೇ ಮಣ್ಣು. ಜಗತ್ತು ನಿರ್ಮಾಣ ಆಗಿದ್ದು ಐದು ತತ್ವಗಳಿಂದ: ಮಣ್ಣು, ನೀರು, ಅಗ್ನಿ, ಗಾಳಿ ಮತ್ತು ಬಯಲು. ಈ ಐದೇ ಐದು ತತ್ವಗಳಿಂದ ಜಗತ್ತು ನಿರ್ಮಾಣವಾಗಿದೆ. ನಮ್ಮ ದೇಹ ನಿರ್ಮಾಣ ಆಗಿದ್ದು ಇದೇ ಮಣ್ಣಿನಿಂದ. ನಮ್ಮ ಕಾಯದ ಕಣ್ಣು, ಕೈ ಕಾಲು ಎಲ್ಲವೂ ಮಣ್ಣಿನಿಂದಲೇ ನಿರ್ಮಾಣವಾಗಿದೆ. ನಮ್ಮ ಕೈ ಮುಟ್ಟುವ ವಿಷಯ ವಸ್ತುಗಳೂ ಮಣ್ಣು. ನಮ್ಮ ಕಾಲು ಮಣ್ಣು. ಕಾಲಿಡುವ ನೆಲ ಅದೂ ಮಣ್ಣು. ನಾವು ಉಣ್ಣುವ ಅನ್ನ ಮಣ್ಣು, ಕುಡಿಯುವ ನೀರೂ ಮಣ್ಣಿನಿಂದ ಆಗಿದ್ದೇ ಆಗಿದೆ.

ನಮಗೆ ಕಾಣುವ ಬೆಳಕು ಮಣ್ಣು, ನಮ್ಮ ಬದುಕು ಮಣ್ಣು. ಜೀವನ ಅಂದರೆ ಮಣ್ಣಿನಿಂದ ಮಣ್ಣಿಗೆ ಪಯಣ ಅಷ್ಟೆ. ನಾವು ಹುಟ್ಟಿದ್ದು ಮಣ್ಣಿನಿಂದ. ಮಣ್ಣಿನಿಂದ ಮಣ್ಣಿಗೆ ಬಂದೆ. ಮಣ್ಣಿನಲ್ಲೇ ಬೆಳೆದೆ. ಮಣ್ಣಿಗಾಗಿ ಬಡಿದಾಡಿದೆ. ಕೊನೆಗೊಂದು ದಿನ ಮಣ್ಣಿನಲ್ಲೇ ಒಂದಾದೆ. ಅದಕ್ಕೆ ಅಲ್ಲಮ ಪ್ರಭು ‘ಭೂತ ಭೂತವ ಕೂಡಿ ಅದ್ಭುತವಾಯಿತು’ ಎಂದರು. ಐದೂ ತತ್ವಗಳು ಜಡ. ಅದರೆ ಅದರಿಂದ ಚೈತನ್ಯ ಉತ್ಪತ್ತಿ ಆಯಿತಲ್ಲ ಅದಕ್ಕೆ ಅಲ್ಲಮ ಪ್ರಭು ಅದ್ಭುತ ಎಂದು ಕರೆದರು.

ADVERTISEMENT

ಇದು ಬರೀ ಮಣ್ಣಲ್ಲ. ನಾವು ಬರೀ ಮಣ್ಣು ಎಂದರೆ ಅದಕ್ಕೆ ಅರ್ಥವೇ ಇಲ್ಲ. ವಿಷ ಹಾಕಿದರೂ ಭೂಮಿ ಅಮೃತದಂತಹ ಹಣ್ಣು ಕೊಡುತ್ತದಲ್ಲ, ಅದು ಪವಾಡ. ಇದು ಬರೀ ಮಣ್ಣಲ್ಲವೋ, ಇದು ಬರೀ ಕಲ್ಲಲ್ಲವೋ, ಇದು ಬರೀ ಬಿಸಲಲ್ಲವೋ, ದೇವರ ಹೃದಯ. ಆನಂದಮಯ ಈ ಜಗ ಹೃದಯ ಎಂದು ಕವಿ ಹೇಳುತ್ತಾರೆ. ಜಗತ್ತಿನ ತುಂಬಾ ಭಗವಂತ ಆನಂದ ತುಂಬಿಟ್ಟಿದ್ದಾನೆ. ಆದರೆ, ಮನುಷ್ಯನಿಗೆ ಬದುಕಲು ಬರೋದಿಲ್ಲ. ಇದೇ ಮಣ್ಣು, ಇದೇ ಗಾಳಿ, ಇದೇ ಬೆಳಕು, ಇದೇ ನೀರು. ಪಶು ಪಕ್ಷಿ ಪ್ರಾಣಿಗಳು ಸಂತೋಷದಿಂದ ಬದುಕಿವೆ. ನಮಗೂ ಇದೇ ಆದರೂ ಅವು ಹೇಗೆ ಬದುಕಿವೆ, ನಾವು ಹೇಗೆ ಬದುಕಿದ್ದೇವೆ ನೋಡಿ. ಅವು ಜಗತ್ತನ್ನು ಅನುಭವಿಸಿವೆ. ಮನುಷ್ಯನಿಗೆ ಜಗತ್ತನ್ನು ಅನುಭವಿಸುವುದು ಗೊತ್ತಿಲ್ಲ. ಜೇನು ಹುಳುಗಳು ಹೂವಿನಿಂದ ಹೂವಿಗೆ ಹಾರಿ ಮಧು ತಯಾರಿಸುತ್ತವೆ.

ಜೇನುಗಳು ಎಲ್ಲಿಯೇ ಮಧು ತಯಾರಿಸಿದರೂ ಮನುಷ್ಯ ಅದನ್ನು ಕಿತ್ತು ತಿನ್ನುತ್ತಾನೆ. ಒಂದು ಗಿಡ ಜೇನು ಹುಳವನ್ನು ‘ಈ ಮನುಷ್ಯ ಎಲ್ಲ ಕಿತ್ತುಕೊಂಡು ತಿನ್ನುತ್ತಾನಲ್ಲ. ಆದರೂ ನೀನು ಯಾಕೆ ಮಧು ತಯಾರು ಮಾಡುತ್ತಿ’ ಎಂದು ಕೇಳಿತು. ಅದಕ್ಕೆ ಜೇನು ನೊಣ ‘ನಾನು ಮಾಡಿದ ಮಧುವನ್ನು ಮನುಷ್ಯ ಕಿತ್ತು ತಿನ್ನಬಹುದು. ಆದರೆ ಮಧು ತಯಾರಿಸುವ ಕಲೆ ನನ್ನೊಳಗೆ ಇದೆಯಲ್ಲ, ಅದನ್ನು ಕದಿಯಲು ಮನುಷ್ಯನಿಗೆ ಸಾಧ್ಯವಿಲ್ಲ’ ಎಂದು ಉತ್ತರಿಸಿತು.

ನಿಸರ್ಗ ಅಷ್ಟು ಅದ್ಭುತ. ಇದೇ ಮಣ್ಣು, ಇದೇ ಗಾಳಿ, ಇದೇ ಬೆಳಕು ಉಳಿದೆಲ್ಲ ಪ್ರಾಣಿಗಳ ಬದುಕು ಸ್ವರ್ಗ. ನಮ್ಮದು ನರಕ. ನಮಗೆ ಬದುಕಲು ಬಂದಿಲ್ಲ. ನಿಸರ್ಗ ಏನು ಕೊಟ್ಟಿದೆ ಅದನ್ನು ಸಂತೋಷವಾಗಿ ಅನುಭವಿಸಲು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.