ರಕ್ತಪಾತದಲ್ಲಿ ಜನಿಸಿದ ಪಾಕಿಸ್ತಾನ ರಕ್ತದಲ್ಲೇ ಜೀವಿಸುತ್ತಿದೆ. ಭಾರತ ಹೆಚ್ಚು ಸೌಜನ್ಯದಿಂದ, ಸಹನೆಯಿಂದ ನೆರೆಹೊರೆಯ ದೇಶಗಳೊಡನೆ ಸಹೋದರತ್ವ ಭಾವನೆಯಿಂದ ಸಂಬಂಧ ಇರಿಸಿಕೊಳ್ಳಲು ನಿರಂತರವಾಗಿ ದುಡಿಯುತ್ತಿದೆ. ಇದನ್ನು ನಮ್ಮ ಸೈನಿಕರ ನಿಶ್ಶಕ್ತಿ ಎಂದು ಪಾಕಿಸ್ತಾನ ಭಾವಿಸಬಾರದು. ಹೇಳೋದು ಒಂದು, ಹಿಡಿಯುವ ದಾರಿ ಬೇರೆ. ಪಾಕಿಸ್ತಾನದ ರಾಜಕೀಯ ಧುರೀಣರು ವಚನಭ್ರಷ್ಟರು.
ಉಗ್ರವಾದಿಗಳನ್ನು ಸೃಷ್ಟಿಸಿ, ಬೆಳೆಸಿ, ರಕ್ಷಣೆ ಕೊಟ್ಟು, ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವರ್ತಿಸುವ ಈ ಕುಚೇಷ್ಟ ದೇಶವನ್ನು ಅಲ್ಲಿಯ ಜನರೇ ಸರ್ವನಾಶ ಮಾಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಭಾರತದ ಸೈನಿಕರ ಮೇಲೆ ನಿತ್ಯ ಗುಂಡು ಹಾರಿಸಿ ಕೊಲ್ಲುವುದಕ್ಕೆ ಯಾವ ಧರ್ಮ, ಕಾನೂನು ಆಸ್ಪದ ಕೊಡುವುದು? ಇಸ್ಲಾಂ ಧರ್ಮದ ಮೂಲಭೂತ ಮೌಲ್ಯಗಳನ್ನು ತಿರಸ್ಕರಿಸಿ, ಮಾನವೀಯತೆಗೆ ತಿಲಾಂಜಲಿ ಕೊಟ್ಟು ಅಲ್ಲಿಯ ಜನರಿಗೆ ಶಾಂತಿಯಿಂದ ಜೀವನ ನಡೆಸಲು ಬಿಡದ ಸರ್ಕಾರ ಇದ್ದರೆಷ್ಟು ಹೋದರೆಷ್ಟು?
ನಮ್ಮ ಸೈನಿಕರ ಮರಣದಿಂದ ಅವರ ಕುಟುಂಬದ ಮೇಲಾಗುವ ಪರಿಣಾಮದ ಕಡೆ ಗಮನ ಹರಿಸಬೇಕು. ಸರ್ಕಾರ ರೂ 5 ಲಕ್ಷ ಅಥವಾ 50 ಲಕ್ಷ ಪರಿಹಾರ ಕೊಡಬಹುದು. ಆದರೆ ವಿಧವೆ ಮತ್ತು ಅನಾಥ ಮಕ್ಕಳಿಗೆ ಆದ ನಷ್ಟ ಭರಿಸಲು ಸಾಧ್ಯವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.