ADVERTISEMENT

ಸಂಗತ | ಇಳೆ ಒಂದೇ, ಓಜೋನ್ ಕೊಡೆಯೊಂದೇ

ನಿಸರ್ಗದ ಉಡುಗೊರೆಯಾದ ಓಜೋನ್ ಕೊಡೆಯನ್ನು ನಮ್ಮ ಉಳಿವಿಗಾಗಿ ನಾವು ಸಂರಕ್ಷಿಸಿಕೊಳ್ಳಲೇಬೇಕಾಗಿದೆ

ಯೋಗಾನಂದ
Published 15 ಸೆಪ್ಟೆಂಬರ್ 2022, 19:31 IST
Last Updated 15 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಜೀವನ ಒಂದು ಈರುಳ್ಳಿಯಂತೆ. ಒಮ್ಮೆಗೆ ಒಂದು ಪದರ ಸುಲಿಯುತ್ತೇವೆ, ಕಣ್ಣೀರು ಹಾಕುತ್ತೇವೆ’- ಅಮೆರಿಕದ ಕವಿ ಕಾರ್ಲ್ ಸ್ಯಾಂಡ್‍ಬರ್ಗ್ ಅವರ ಈ ನುಡಿ ಭೂಮಿಯ ಓಜೋನ್ ಹೊದಿಕೆಗೆ ತಕ್ಕ ಉಪಮೆಯಾಗಿದೆ. ಓಜೋನ್ ಪದರವು ಸೂರ್ಯನ ಹಾನಿಕಾರಕ ಅತಿನೇರಳೆ ವಿಕಿರಣಗಳನ್ನು ತಡೆದು ಭೂಮಿಯ ಜೀವಿಗಳನ್ನು ಕೋಟ್ಯಂತರ ವರ್ಷಗಳಿಂದ ರಕ್ಷಿಸುತ್ತಿದೆ.

ಓಜೋನ್ ಕವಚ ಇಲ್ಲದ ಭೂಮಿ ಸೂರಿಲ್ಲದ ಮನೆಯಂತೆ. ಭಾರತೀಯ ಪರಂಪರೆಯಲ್ಲಿ ಭೂಮಿ, ನೀರು, ಗಾಳಿ, ಅಗ್ನಿ ಮತ್ತು ಆಕಾಶ- ಈ ಪಂಚಭೂತಗಳ ನಡುವೆ ಸಾಮರಸ್ಯವುಂಟು, ಅದನ್ನು ಕೆಡಿಸಬಾರದು ಎಂಬ ಎಚ್ಚರವಿದೆ. ಆಕಾಶ ಎಂದರೆ ಓಜೋನ್ ರಕ್ಷಾಕವಚವೆಂದು ಅರ್ಥೈಸಬಹುದು. ಓಜೋನ್ ಪದರ ನೆಲದಿಂದ 15- 50 ಕಿ.ಮೀ. ಎತ್ತರಕ್ಕೆ ವ್ಯಾಪಿಸಿರುವ ಸ್ತರಗೋಳದ (Stratosphere) ಅತ್ಯಲ್ಪ ಭಾಗ.

ವಾಯುಮಂಡಲದಲ್ಲಿರುವ ಓಜೋನ್ ಪ್ರಮಾಣ ಅತ್ಯಲ್ಪ. ಈ ವರಸದೃಶ ವಿಶಿಷ್ಟ ಪದರ ಕೃಶವಾದರೆ ಸಕಲ ಜೀವರಾಶಿಗಳ ಬದುಕು ಮತ್ತು ಆರೋಗ್ಯಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಆಹಾರ ಜಾಲ, ಮಳೆ ಮಾರುತದ ವಿನ್ಯಾಸ, ಜಾಗತಿಕ ತಪನ, ಋತುಮಾನಗಳು ವ್ಯತ್ಯಯಗೊಳ್ಳುತ್ತವೆ. ಪರಿಸ್ಥಿತಿ ಅದೆಷ್ಟು ಬಿಗಡಾಯಿಸುವುದೆಂದರೆ ಸಮುದ್ರ, ನದಿ, ಕೊಳ, ಸರೋವರಗಳ ಪ್ಲಾಂಕ್‍ಟನ್ ಎಂಬ ಸೂಕ್ಷ್ಮಾಣು ತೇಲುಜೀವಿಗಳ ಸ್ವಾಸ್ಥ್ಯವೂ ಹದಗೆಟ್ಟು ಅವನ್ನು ಆಹಾರವಾಗಿ ಸೇವಿಸುವ ಜಲಚರಗಳೂ ನಶಿಸುತ್ತವೆ. ಓಜೋನ್ ಪದರದಲ್ಲಿ ರಂಧ್ರಗಳಾದಂತೆ ಪರಿಸರ, ಆರೋಗ್ಯ, ಅರ್ಥವ್ಯವಸ್ಥೆಕೆಡುತ್ತವೆ. ಸೂರ್ಯನ ಹಾನಿಕಾರಕ ಅತಿನೇರಳೆ ವಿಕಿರಣಗಳು ಚರ್ಮದ ಕ್ಯಾನ್ಸರ್, ರೋಗನಿರೋಧಕ ಶಕ್ತಿಯ ಹರಣಕ್ಕೆ ಕಾರಣವಾಗುತ್ತವೆ. ಪ್ರಾಣಿಗಳಿಗೆ ವಿಶೇಷವಾಗಿ ಕಣ್ಣಿನ ಕ್ಯಾನ್ಸರ್ ಬಾಧಿಸುತ್ತದೆ.

ADVERTISEMENT

ಓಜೋನ್ ಪದರ ತೆಳುವಾಗುತ್ತಿದೆ ಎಂದು ಮೊದಲಿಗೆ ಗುರುತಿಸಿದ್ದು 1985ರಲ್ಲಿ. ಎರಡೇ ವರ್ಷಗಳ ನಂತರ ಅಂದರೆ 1987ರ ಸೆ. 16ರಂದು ವಿಶ್ವಮಟ್ಟದಲ್ಲಿ ವಿಜ್ಞಾನಿಗಳು, ನಾಯಕರು, ನೀತಿ ನಿರೂಪಕರೆಲ್ಲ ಸೇರಿ ಓಜೋನ್ ಪದರ ರಕ್ಷಣೆಗೆ ‘ಮಾಂಟ್ರಿಯಲ್ ಪ್ರೊಟೊಕಾಲ್’ ಎಂಬ ಒಪ್ಪಂದಕ್ಕೆ ಬಂದರು. ವಾತಾವರಣದಲ್ಲಿ ಓಜೋನ್ ಕ್ಷಯಕ್ಕೆ ಕಾರಣವಾಗುವ ವಸ್ತುಗಳ ಉತ್ಪಾದನೆ ಮತ್ತು ಆಮದನ್ನು ಸ್ಥಗಿತಗೊಳಿಸಲು ಒಕ್ಕೊರಲ ನಿರ್ಣಯಕ್ಕೆ ಬರಲಾಯಿತು.

1994ರಲ್ಲಿ ವಿಶ್ವಸಂಸ್ಥೆಯು ಪ್ರತಿವರ್ಷ ಸೆ. 16 ಅನ್ನು ‘ವಿಶ್ವ ಓಜೋನ್ ದಿನ’ವಾಗಿ ಆಚರಿಸಬೇಕೆಂದು ಘೋಷಿಸಿತು. ಒಂದೊಂದು ವರ್ಷವೂ ಒಂದೊಂದು ಅರ್ಥಪೂರ್ಣ ಘೋಷಣಾ ನುಡಿಯಡಿಯಲ್ಲಿ ಉತ್ಸಾಹ ಗರಿಗೆದರುತ್ತದೆ. 2021ರಲ್ಲಿ ‘ನಾವು ಹಾಗೂ ನಮ್ಮ ಆಹಾರ ಮತ್ತು ಲಸಿಕೆಗಳು ಸುರಕ್ಷಿತವಾಗಿರಲಿ’, ಇದೀಗ 2022ರಲ್ಲಿ ‘ಧರೆಯಲ್ಲಿ ಜೀವ ಸಂರಕ್ಷಣೆಗೆ ಜಾಗತಿಕ ಸಹಕಾರ’ ಒಕ್ಕಣೆ.

ಮೂರು ಆಮ್ಲಜನಕದ ಪರಮಾಣುಗಳಿಂದ ರಚಿತವಾದ ಓಜೋನ್, ಆಮ್ಲಜನಕದ ಭಿನ್ನ ರೂಪ. ಪ್ರಕೃತಿಯ ವಿಸ್ಮಯವೆಂದರೆ, ಸೂರ್ಯನ ಅತಿನೇರಳೆ ಕಿರಣಗಳಿಂದಲೇ ಓಜೋನ್ ಹೊದಿಕೆಯ ನಿರ್ಮಿತಿ! ಅತಿನೇರಳೆ ವಿಕಿರಣಗಳು ಆಮ್ಲಜನಕದ ಅಣುಗಳನ್ನು ಸೀಳಿ, ಬಿಡಿ ಆಮ್ಲಜನಕ ಅಣುಗಳನ್ನಾಗಿಸುತ್ತವೆ. ಇವು ಆಮ್ಲಜನಕ ಅಣುವಿನೊಡನೆ ಸೇರಿ ಓಜೋನ್ ಆಗುವುದು. ರೆಫ್ರಿಜಿರೇಟರ್, ಏರ್‌ಕಂಡೀಷನರ್‌, ಏರೊಸಾಲ್ ಸ್ಪ್ರೇ ಅಥವಾ ಸಿಂಪರಣೆ ಧಾರಕಗಳಲ್ಲಿ ಮತ್ತು ಅಗ್ನಿಶಮನ ಪರಿಕರಗಳಲ್ಲಿ ಕ್ಲೋರೊಫ್ಲೂರೊ ಕಾರ್ಬನ್‌ಗಳು (ಸಿ.ಎಫ್.ಸಿ.) ಎಂಬ ಮನುಷ್ಯಕೃತ ಅನಿಲವನ್ನು ಇಂಧನಗಳನ್ನಾಗಿ ಬಳಸಲಾಗುತ್ತದೆ. ಇವು ಮಾಡುವ ಕಾರ್ಯ ಗೊತ್ತೇ? ಓಜೋನ್ ಪದರ ಹೊಕ್ಕು ಅಲ್ಲಿ ಓಜೋನ್ ಅಣುಗಳನ್ನು ಆಕ್ಸಿಜನ್ ಅಣುಗಳಾಗಿ ಪರಿವರ್ತಿಸುತ್ತವೆ. ಅಗೋ ರಕ್ಷಾಕವಚದಲ್ಲಿ ರಂಧ್ರಗಳು! ಸಿ.ಎಫ್.ಸಿ. ಜೊತೆಗೆ ಮೀಥೈಲ್ ಬ್ರೊಮೈಡ್, ಹ್ಯಾಲನ್, ಕಾರ್ಬನ್‍ಟೆಟ್ರಾಕ್ಲೋರೈಡ್ಮುಂತಾದ ಅನಿಲಗಳು ಓಜೋನ್ ಪದರ ಕೃಶಗೊಳ್ಳಲು ಸಾಥ್ ನೀಡುತ್ತವೆ. ಅನಿಯಂತ್ರಿತ ರಾಕೆಟ್ ಉಡಾವಣೆಗಳಿಂದಲೂ ಓಜೋನ್ ಪದರಕ್ಕೆ ಅಪಾಯವಿದೆ. ಒಂದೇ ಒಂದು ಕ್ಲೋರಿನ್ ಅಥವಾ ಬ್ರೊಮೈನ್ ಪರಮಾಣು ಲಕ್ಷ ಓಜೋನ್ ಅಣುಗಳನ್ನು ನಾಶಪಡಿಸಲು ಸಾಕು!

ಓಜೋನ್ ಅಣು ಸೃಷ್ಟಿಯಾಗುವುದಕ್ಕಿಂತ ತ್ವರಿತವಾಗಿ ಅದರ ಧ್ವಂಸವಾಗುತ್ತದೆ. ಅದಕ್ಕೇ ಹೇಳುವುದು ನಿಸರ್ಗದ ಉಡುಗೊರೆಯಾದ ಓಜೋನ್ ಕೊಡೆಯನ್ನು ನಾವು ಸಂರಕ್ಷಿಸಿಕೊಳ್ಳಬೇಕೆಂದು. ಸೌರಕಲೆಗಳು, ಜ್ವಾಲಾಮುಖಿಗಳು ಓಜೋನ್ ಪದರದ ಹಾನಿಗೆ ನೈಸರ್ಗಿಕ ಕಾರಣಗಳಾದರೂ ಅವುಗಳ ಕೊಡುಗೆ ಶೇ 2ಕ್ಕಿಂತಲೂ ಕಡಿಮೆ.

ಓಜೋನ್ ಪದರದ ಸಂರಕ್ಷಣೆಗೆ ವ್ಯಕ್ತಿಗತವಾಗಿ ಮಾಡಬಹುದಾದ ಕ್ರಮಗಳು ಹಲವು. ಕಾರು, ಸ್ಕೂಟರ್, ವ್ಯಾನ್ ಹಸಿರುಮನೆ ಅನಿಲಗಳನ್ನು ಅತಿಯಾಗಿ ಹೊರಸೂಸಿ ಭೂಮಿಯ ಉಷ್ಣತೆ ಹೆಚ್ಚಿಸುತ್ತವೆ. ಆದಕಾರಣ ಅವುಗಳ ಬಳಕೆ ಕನಿಷ್ಠತಮಗೊಳಿಸುವುದು ದಿಟ್ಟ ಹೆಜ್ಜೆ. ಆಹಾರ ಪದಾರ್ಥಗಳನ್ನು ಹಲವು ದಿನಗಳವರೆಗೆ ಕೆಡದಂತಿಡಲು ಪರಂಪರಾಗತ ವಿಧಾನಗಳಿವೆ, ರೆಫ್ರಿಜರೇಟರ್ ಅನಿವಾರ್ಯವೇನಲ್ಲ. ಅಂತೆಯೇ ಕಿಟಕಿಗಳನ್ನು ಋತುಮಾನಗಳಿಗೆ ತಕ್ಕಂತೆ ತೆರೆದು ಗಾಳಿ, ಬೆಳಕು, ಹಿತೋಷ್ಣ ನಿರ್ವಹಣೆ ಮಾಡುವುದು ಅಸಾಧ್ಯವೇನಲ್ಲ.

ನಿಜವಾದ ಸಿರಿತನವು ಐಷಾರಾಮದ ಜೀವನದಲ್ಲಿಲ್ಲ, ಪರಿಸರಸ್ನೇಹದಲ್ಲಿದೆ. ಪರಿಸರಸ್ನೇಹಿ ಶುಚಿಕಾರಕಗಳ ಉಪಯೋಗ ನಮ್ಮ ದಿನಮಾನಗಳ ಶೈಲಿಯಾಗಬೇಕಿದೆ. ಸ್ಥಳೀಯ ಉತ್ಪನ್ನಗಳನ್ನೇ ಉಪಯೋಗಿಸುವುದರಿಂದ ಸಾಗಾಣಿಕೆ ಸಮಸ್ಯೆ ಇರದು, ಅಲ್ಲದೆ ತಾಜಾ ಪದಾರ್ಥಗಳೂ ಲಭಿಸುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.