ಯಲವಿಗಿ ರೈಲು ದುರಂತ: 53 ಮಂದಿ ದಾರುಣ ಸಾವು
(ಪ್ರಜಾವಾಣಿ ಪ್ರತಿನಿಧಿಯಿಂದ)
ಹುಬ್ಬಳ್ಳಿ, ಮಾ. 21– ಯಲವಿಗಿ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದಕ್ಷಿಣ ರೈಲ್ವೆ ಇತಿಹಾಸದಲ್ಲಿಯೇ ಅತಿ ದಾರುಣವಾದ ರೈಲು ದುರಂತದಲ್ಲಿ 53 ಜನ ಸತ್ತು, 41 ಜನ ಗಾಯಗೊಂಡಿದ್ದಾರೆ.
ಮುವ್ವತ್ತೆಂಟು ದೇಹಗಳನ್ನು ಕರ್ನಾಟಕ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ತರಲಾಗಿದ್ದು ಅವುಗಳಲ್ಲಿ ಹತ್ತು ದೇಹಗಳನ್ನು ಗುರುತಿಸಲಾಗಿದೆ.
ಗಾಯಗೊಂಡ ನಲವತ್ತೊಂದು ಮಂದಿಯಲ್ಲಿ ಇಪ್ಪತ್ತೆಂಟು ಮಂದಿಗೆ ಸಣ್ಣ ಗಾಯಗಳಾಗಿವೆಯೆಂದು ಮದರಾಸಿನ ದಕ್ಷಿಣ ರೈಲ್ವೆ ಕಚೇರಿ ಪ್ರಕಟಿಸಿದೆ.
**
ಅದೃಷ್ಟವಂತ
ಬೆಂಗಳೂರು, ಮಾ. 20– ನಿನ್ನೆ ರಾತ್ರಿ ಯಲವಿಗಿ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಡೆಕ್ಕನ್ ಎಕ್ಸ್ಪ್ರಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಖ್ಯಾತ ಕಾರ್ಮಿಕನಾಯಕ ಹಾಗೂ ಅಖಿಲ ಭಾರತ ಭಾರತೀಯ ಮಜ್ದೂರ್ ಸಂಘದ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಶ್ರೀ ಪ್ರಭಾಕರ ಘಾಟೆ ಅವರು ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆಂದು ಇಲ್ಲಿನ ಮಜ್ದೂರ್ ಸಂಘದ ಕಚೇರಿಗೆ ತಲುಪಿರುವ ವರದಿ ತಿಳಿಸಿದೆ.
**
ಮಾರ್ಚಿ 12ರ ವರೆಗೆ ಭಿನ್ನಮತೀಯರ ಪಟ್ಟಿ ಬಂದಿರಲಿಲ್ಲ: ಡಾ. ನಾಗಪ್ಪ ಆಳ್ವ
ಬೆಂಗಳೂರು, ಮಾ. 20– ‘ಪ್ರದೇಶ ಚುನಾವಣಾ ಸಮಿತಿಯ ಭಿನ್ನಮತೀಯ ಸದಸ್ಯರು ಮಾರ್ಚಿ 12ರ ಮಧ್ಯಾಹ್ನದವರೆಗೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಸೂಚಿಸಿ ಪ್ರತ್ಯೇಕ ಪಟ್ಟಿಯನ್ನು ಸಲ್ಲಿಸಿರಲಿಲ್ಲ’ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ನಾಗಪ್ಪ ಆಳ್ವ ಅವರು ಇಂದು ಸ್ಪಷ್ಟಪಡಿಸಿದರು.
ನ್ಯಾಯಾಂಗ ವಿಚಾರಣೆಗೆ: ಪೂಣಚ್ಚ ಪ್ರಕಟಣೆ
ನವದೆಹಲಿ, ಮಾ. 20– ಹುಬ್ಬಳ್ಳಿ ಬಳಿ ಸಂಭವಿಸಿದ ರೈಲ್ವೆ ದುರಂತದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ವಿಚಾರಣೆ ನಡೆಸುವರೆಂದು ರೈಲ್ವೆ ಸಚಿವ ಶ್ರೀ ಸಿ.ಎಂ. ಪೂಣಚ್ಚರವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.