ಅಧಿವೇಶನ ಅನಿರ್ದಿಷ್ಟ ಕಾಲ ಮುಂದಕ್ಕೆ
ಕಲ್ಕತ್ತ, ನ. 29– ಡಾ. ಪಿ.ಸಿ. ಘೋಷ್ರವರ ನಾಯಕತ್ವದಲ್ಲಿ ರಚಿತವಾದ ಹೊಸ ಮಂತ್ರಿಮಂಡಲಕ್ಕೆ ಮನ್ನಣೆ ನೀಡಲು ಪಶ್ಚಿಮ ಬಂಗಾಳ ವಿಧಾನ ಸಭೆಯ ಅಧ್ಯಕ್ಷ ಬಿ.ಕೆ. ಬ್ಯಾನರ್ಜಿಯವರು ಇಂದು ನಿರಾಕರಿಸಿ ವಿಧಾನ ಸಭೆಯ ಅಧಿವೇಶನವನ್ನು ಅನಿರ್ದಿಷ್ಟ ಕಾಲ ಮುಂದಕ್ಕೆ ಹಾಕಿದರು.
ರಾಜ್ಯಪಾಲರು ಕೈಗೊಂಡ ಕ್ರಮಗಳು ‘ಸಂವಿಧಾನಕ್ಕೆ ವಿರುದ್ಧವಾದುದೆಂದು’ ಸಭಾಧ್ಯಕ್ಷರು ಘೋಷಿಸಿದರು.
ಶಾಸನ ಸಭಾಧ್ಯಕ್ಷರ ಅಧಿಕಾರ ವ್ಯಾಪ್ತಿ ಕುರಿತು ಚಕಮಕಿ
ನವದೆಹಲಿ, ನ. 29– ಸರ್ಕಾರವೊಂದನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ಹಕ್ಕು ವಿಧಾನ ಸಭಾಧ್ಯಕ್ಷರಿಗಿದೆಯೆ?
ಭೋಜನ ವಿರಾಮದ ನಂತರ ಸಭೆ ಸೇರಿದಾಗ ಬಿರುಗಾಳಿಯಂತೆ ಈ ಪ್ರಶ್ನೆ ಎದ್ದಿತು. ‘ಡಾ. ಪಿ.ಸಿ. ಘೋಷ್ರ ಸರ್ಕಾರವನ್ನು ಪಶ್ಚಿಮ ಬಂಗಾಳ ವಿಧಾನ ಸಭಾಧ್ಯಕ್ಷರು ಮಾನ್ಯ ಮಾಡುವ ‘ಉತ್ಕಟ ಪರಿಸ್ಥಿತಿ’ ಉಂಟಾಗಿದೆ. ಅವರ ಈ ಕ್ರಮ ಸಂವಿಧಾನಾತ್ಮಕ ಪ್ರಶ್ನೆ, ಸಭಾಧ್ಯಕ್ಷರು ತಮ್ಮ ಸಂಯುಕ್ತ ರಂಗದ ಮಿತ್ರರ ಮೂಲಕ ಬಿಕ್ಕಟ್ಟನ್ನು ಹಾಗೆಯೇ ಉಳಿಸಲು ಯತ್ನಿಸುತ್ತಿದ್ದಾರೆ’ ಎಂದು ಸ್ವತಂತ್ರ ಪಕ್ಷದ ಸದಸ್ಯ ಶ್ರೀ ಲೋಕನಾಥ ಮಿಶ್ರರು ಆರೋಪಿಸಿದರು.
ಡಾ. ಘೋಷ್ಗೆ ಪೆಟ್ಟು
ಕಲ್ಕತ್ತ, ನ. 29– ವಿಧಾನ ಸಭೆಯ ಸಭಾಭವನದಲ್ಲಿ ಇಂದು ಯಾರೊ ಎಸೆದ ಮರದ ತುಂಡೊಂದು ಬಡಿದು ಬಂಗಾಳದ ಮುಖ್ಯಮಂತ್ರಿ ಡಾ. ಪಿ.ಸಿ. ಘೋಷ್ರವರ ಬಲಗಣ್ಣಿನ ಕೆಳಗಡೆ ಪುಟ್ಟಗಾಯವಾಯಿತೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.