ವಿಧಾನಮಂಡಲದ ತುರ್ತು ಅಧಿವೇಶನ ಸಂಭವ
ಬೆಂಗಳೂರು, ನ. 14– ಮಹಾಜನ್ ಗಡಿ ಆಯೋಗದ ತೀರ್ಪನ್ನು ಪರಿಶೀಲಿಸಲು ರಾಜ್ಯದ ವಿಧಾನಮಂಡಲದ ತುರ್ತು ಅಧಿವೇಶನ ಜರುಗುವ ಸಂಭವವಿದೆ.
ವಿಧಾನಮಂಡಲದ ತುರ್ತು ಅಧಿವೇಶನವನ್ನು ಕರೆಯಬೇಕೆಂಬ ವಿರೋಧ ಪಕ್ಷಗಳ ಸಲಹೆಯನ್ನು ನವೆಂಬರ್ 17 ಅಥವಾ 18 ರಂದು ನಡೆಯುವ ಮಂತ್ರಿ ಮಂಡಲದ ಸಭೆ ಪರಿಶೀಲಿಸಲಿದೆ.
**
3 ದಿನಗಳ ಅಧಿವೇಶನ?
ಬೆಂಗಳೂರು, ನ. 14– ಗಡಿ ಆಯೋಗದ ತೀರ್ಪನ್ನು ಚರ್ಚಿಸಲು ವಿಧಾನ ಮಂಡಲದ ತುರ್ತು ಅಧಿವೇಶನ ನಡೆಸಲು ಸರಕಾರ ನಿರ್ಧರಿಸಿದಲ್ಲಿ ಆ ಅಧಿವೇಶನ 3 ದಿನಗಳ ಕಾಲ ನಡೆಯುವುದೆಂದು ನಿರೀಕ್ಷಿಸಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ವಿಧಾನ ಮಂಡಲದ ಅಧಿವೇಶನ ಮುಕ್ತಾಯವಾದಾಗ ರಾಜ್ಯಪಾಲರು ಅಧಿವೇಶನವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹಾಕಿದರು.
**
ಅನಿರ್ಬಂಧಿತ ಸಕ್ಕರೆ ಮಾರಾಟ ಸುಗ್ರೀವಾಜ್ಞೆ: ಎಂ.ಪಿ.ಗಳ ಆಕ್ಷೇಪ
ನವದೆಹಲಿ, ನ. 14– ಸಕ್ಕರೆ ಕಾರ್ಖನೆಗಳು ತಮ್ಮ ಶೇ 40ರಷ್ಟು ಉತ್ಪಾದನೆಯನ್ನು ಬಹಿರಂಗವಾಗಿ ಪೇಟೆಯಲ್ಲಿ ಮಾರಲು ಅವಕಾಶ ಕೊಡುವ ಸುಗ್ರೀವಾಜ್ಞೆಯನ್ನು ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಲ್ಲಿ ಹೀಗಳೆದರು.
ಪಕ್ಷೇತರ ಸದಸ್ಯ ಎಸ್.ಎಂ. ಬ್ಯಾನರ್ಜಿಯವರು ಕಾಂಗ್ರೆಸ್ ಪಕ್ಷಕ್ಕೆ ಸಕ್ಕರೆ ಉದ್ಯಮಿಗಳು ‘ಔದಾರ್ಯದಿಂದ’ ಕಾಣಿಕೆ ನೀಡಿರುವುದು ಈ ಸುಗ್ರೀವಾಜ್ಞೆಗೆ ಕಾರಣವೆಂದರು.
**
‘ಸಿ.ಕೆ.’ ಅಂತ್ಯಕ್ರಿಯೆ
ಇಂದೂರು, ನ. 14– ಇಂದು ಇಲ್ಲಿ ನಿಧನ ಹೊಂದಿದ ಖ್ಯಾತ ಕ್ರಿಕೆಟ್ ಆಟಗಾರ ಸಿ.ಕೆ. ನಾಯಿಡು (ಜನಪ್ರಿಯ ಹೆಸರು ‘ಸಿ.ಕೆ.’) ಅವರ ಅಂತ್ಯಕ್ರಿಯೆ ಇಲ್ಲಿನ ಪ್ರೇಂಬಾನ್ ರುದ್ರಭೂಮಿಯಲ್ಲಿ ನಡೆಯಿತು. ಅವರ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡಿದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.