ಮುಖ್ಯಮಂತ್ರಿ ಸ್ಥಾನಕ್ಕೆ ಎಸ್.ಎನ್. ರಾಜೀನಾಮೆ: ವಿಧಾನಸಭೆಯಲ್ಲಿ ಪ್ರಕಟಣೆ
ಬೆಂಗಳೂರು, ಮಾ. 26– ಪ್ರಸ್ತುತ ಬಜೆಟ್ ಅಧಿವೇಶನ ಮುಗಿದ ಕೆಲವೇ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ತಾವು ಮುಂದುವರೆಯುತ್ತಿರುವುದರ ಸಂಬಂಧದಲ್ಲಿ ಶಂಕೆ ಸೂಚಿಸಿ ಪ್ರಕಟವಾದ ವರದಿಗಳಿಗೆ ಮತ್ತು ಎದ್ದ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ ಶ್ರೀ ನಿಜಲಿಂಗಪ್ಪನವರು ‘ಇದರ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುವುದು ನನಗೆ ಬೇಡವಾಗಿದೆ. ನಾನು (ದೆಹಲಿಗೆ) ಹೋಗಲೇಬೇಕಾಗುತ್ತದೆ, ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಅಧಿವೇಶನ ಮುಗಿಯುವ ನಿರೀಕ್ಷೆಯಿದೆ.
ಮುಂದಿನ ಮುಖ್ಯಮಂತ್ರಿ ಯಾರು? ಆಯ್ಕೆ ಯಾವಾಗ?
ಬೆಂಗಳೂರು, ಮಾ. 26– ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡುವುದಾಗಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ನಿರ್ದಿಷ್ಟವಾಗಿ ವಿಧಾನ
ಸಭೆಯಲ್ಲಿ ಹೇಳಿಕೆ ನೀಡಿದ ನಂತರ ಅವರ ಉತ್ತರಾಧಿಕಾರಿ ಯಾರು? ಎಂಬ ಬಗ್ಗೆ ಲಾಬಿಗಳಲ್ಲಿ ಊಹಾಪೋಹ ಆರಂಭವಾಯಿತು.
ಈಗಾಗಲೇ ವರದಿಯಾಗಿರುವಂತೆ, ಉತ್ತರಾಧಿಕಾರಿಯ ಬಗ್ಗೆ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಮತ್ತು ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿ ಅವರುಗಳ ಹೆಸರುಗಳು ಕಾಂಗ್ರೆಸ್ ಪಕ್ಷದ ವಲಯಗಳಲ್ಲಿ ಚರ್ಚಿಸಲ್ಪಡುತ್ತಿವೆ.
ಶ್ರೀ ವಿ.ವಿ. ಗಿರಿ ಅವರ ಪತ್ನಿ ಹೆಸರಿನಲ್ಲಿ ಆಸ್ತಿ: ಆಪಾದನೆ ತನಿಖೆಗೆ ಮುಖ್ಯಮಂತ್ರಿ ಸಿದ್ಧ
ಬೆಂಗಳೂರು, ಮಾ. 26– ಉಪರಾಷ್ಟ್ರಪತಿ ಶ್ರೀ ವಿ.ವಿ. ಗಿರಿಯವರು ತಮ್ಮ ಪತ್ನಿ ಹೆಸರಿನಲ್ಲಿ ನಗರದ ಬಳಿ ಆಸ್ತಿ ಮಾಡಿಕೊಂಡಿದ್ದಾರೆಂಬ ಆಪಾದನೆ ಬಗ್ಗೆ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನಸಭೆಯಲ್ಲಿ ಆಶ್ವಾಸನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.