ADVERTISEMENT

ಭಾನುವಾರ, 18-9-1961

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ವಿಶ್ವಸಂಸ್ಥೆ ಪಡೆಗಳ ಸಹಾಯಕ್ಕೆ ಕಾಂಗೊ ಪಡೆ ಕಳಿಸಲು ಒತ್ತಾಯ
ಲಿಯೊಫೋರ್ಡ್‌ವಿಲ್, ಸೆ.
17 - ಕಟಾಂಗದ ಅಧ್ಯಕ್ಷ ಫೋಂಬೆಯ ಯುದ್ಧ ಸ್ತಂಭನ ಮಾತುಕತೆಗಳಿಗೆ ಬದಲು ವಿಫಲವಾಗಿ ರುವುದರಿಂದ ಕೇಂದ್ರ ಕಾಂಗೊ ಸರ್ಕಾರದ ಬಳಿ ಇರುವ ಪಡೆಗಳನ್ನು ಕಟಾಂಗದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಪಡೆಗಳಿಗೆ ಬೆಂಬಲ ಕೊಡಲು ಕಳುಹಿಸಬೇಕೆಂದು ಕಾಂಗೊ ಪಾರ್ಲಿಮೆಂಟು ಇಂದು ಒತ್ತಾಯ ಪಡಿಸಿದೆ.

ಯುದ್ಧಸ್ತಂಭನ ಮಾತುಕತೆಗಳು ಇನ್ನೇನು ಆರಂಭ ವಾಗಲಿದೆಯೆಂದು ವಿಶ್ವರಾಷ್ಟ್ರ ಸಂಸ್ಥೆಯ ಮುಖ್ಯ ಪ್ರತಿನಿಧಿ ಡಾ. ಕಾನೂರ್ ಕ್ರೂಸ್ ಓಬ್ರಿಯರ್‌ರ ಸಹಾಯಕರೊಬ್ಬರು ವಿಶ್ವ ಸಂಸ್ಥೆ ಕೇಂದ್ರಕ್ಕೆ ಕಳೆದ ರಾತ್ರಿಯೇ ತಂತಿ ಕಳುಹಿಸಿದ್ದಾರೆಂದು ವಿಶ್ವರಾಷ್ಟ್ರ ಸಂಸ್ಥೆಯ ವಕ್ತಾರರು ಇಂದು ಇಲ್ಲಿ ತಿಳಿಸಿದರು.

ಸಿಕ್ ಗುರುದ್ವಾರಗಳ ಮೇಲೆ ಮತ್ತೆ ಆಕ್ರಮಣ
ಭಟಿಂಡ, ಸೆ. 17
-  ಫರೀದ್‌ಕೋಟೆ ಸಬ್‌ಡಿವಿಷನ್ನಿನ ಜೈತು ಮತ್ತು ಕೊಟ್ಟಾಪುರ ಎಂಬ ಪ್ರದೇಶಗಳಲ್ಲಿನ ಎರಡು ಸಿಕ್ ಗುರುದ್ವಾರಗಳ ಮೇಲೆ ಇಂದು ಬೆಳಿಗ್ಗೆ ಪೊಲೀಸರು ಆಕ್ರಮಣ ನಡೆಸಿ ತಲೆತಪ್ಪಿಸಿ ಕೊಂಡಿದ್ದವರೆಂದು ಹೇಳಲಾದ ದರ್ಶನ್ ಸಿಂಗ್ ಮತ್ತು ದಯಾಲ್ ಸಿಂಗ್ ಪರ‌್ವಾನ ಎಂಬಿಬ್ಬರನ್ನು ದಸ್ತಗಿರಿ ಮಾಡಿದರು.
ನಿನ್ನೆ ದಿನ ಕಪೂರ್ತಲದ ಎರಡು ಗುರುದ್ವಾರಗಳ ಮೇಲೆ ಪೊಲೀಸರು ಆಕ್ರಮಣ ನಡೆಸಿ, ಭರ್ಜಿಯನ್ನು ಹೊಂದಿದ್ದ ಅಪರಾಧದ ಮೇಲೆ ದೇವಾಲಯದ ಅರ್ಚಕರನ್ನೂ, ಗಸಗಸೆ ಕಾಯಿಗಳನ್ನು ಹೊಂದಿದ್ದಕ್ಕಾಗಿ ಮತ್ತೊಬ್ಬನನ್ನೂ ದಸ್ತಗಿರಿ ಮಾಡಿದರು.

ನಿದ್ರಾ ರಹಿತ ತಾರಾಸಿಂಗ್
ಅಮೃತಸರ, ಸೆ. 17
-  ಮಾಸ್ಟರ್ ತಾರಾಸಿಂಗ್‌ರು ನಿನ್ನೆ ಇಡೀ ರಾತ್ರಿ ಆಯಾಸದಿಂದಿದ್ದರೆಂದೂ, ನಿದ್ದೆ ಹೋಗಲಿಲ್ಲ ವೆಂದೂ ಅವರ ಉಪವಾಸದ 33ನೇ ದಿನವಾದ ಇಂದು ಬೆಳಿಗ್ಗೆ ಹೊರಟ ವೈದ್ಯರ ಪ್ರಕಟಣೆ ತಿಳಿಸಿದೆ.

ಅವರಿಗೆ ನಿಶ್ಯಕ್ತಿ ಹೆಚ್ಚಿದೆಯೆಂದು ಇಂದು ಬೆಳಿಗ್ಗೆ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದರು. ಮೂಲವ್ಯಾಧಿಯ ಕಾರಣ ರಕ್ತಸ್ರಾವವು ಇನ್ನೂ ಆಗುತ್ತಿದ್ದರೂ ನಿನ್ನೆಗಿಂತ ಕಡಿಮೆಯಾಗಿ ದೆಯೆಂದೂ ಪ್ರಕಟಣೆ ಹೇಳಿದೆ.

ಗಂಗಾನದಿಯಲ್ಲಿ ಪ್ರವಾಹ ಏರಿಕೆ
ಲಕ್ನೊ, ಸೆ. 17
- ವಾರಣಾಸಿ, ಅಲಹಾಬಾದ್, ಫಾಜಪೂರ್ ಮತ್ತು ಬಲ್ಲಯಾ ಮೂಲಕ ಹರಿಯುತ್ತಿರುವ ಗಂಗಾ ನದಿಯಲ್ಲಿ ಪುನಃ ಪ್ರವಾಹ ಏರುತ್ತಿದೆಯೆಂದು ಉತ್ತರ ಪ್ರದೇಶ್ ಸರ್ಕಾರಿ ಮೂಲಗಳಿಗೆ ಬಂದಿರುವ ವರದಿಗಳು ತಿಳಿಸುತ್ತವೆ. ಶನಿವಾರ ಕಾಶಿ ಬಳಿ ಗಂಗಾ ನದಿಯಲ್ಲಿ ಪ್ರವಾಹ ಅಪಾಯ ಮಟ್ಟಕ್ಕಿಂತ ಮೂರು ಅಡಿ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.