ADVERTISEMENT

ಭಾನುವಾರ, 25-9-1961

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಕಟಾಂಗದಲ್ಲಿ ಭಾರತದ ಸೈನ್ಯ ದೌರ್ಜನ್ಯವೆಸಗಲಿಲ್ಲ
ಲಿಯೊಪೋಲ್ಡ್‌ವಿಲ್, ಸೆ. 24
- ಕಟಾಂಗದಲ್ಲಿರುವ ಭಾರತದ ಸೈನಿಕರಾರೂ, ಕೆಲವರು ಆಪಾದಿಸಿರುವಂತೆ ದೌರ್ಜನ್ಯಗಳೆನ್ನೆಸಗಿಲ್ಲವೆಂದು ಕಾಂಗೋದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ದಂಡನಾಯಕರಾದ ಜನರಲ್ ಸೀನ್‌ಮೆಕ್ಕೆಯೋವರ್‌ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಮ್ಮ ಮೇಲಿನ ದಾಳಿಗೆ ಅವರು ಪ್ರತಿಕ್ರಮ ಕೈಗೊಂಡಾಗ ಕೆಲವರು ಹತರಾದರೆಂದೂ, ಅದು ದೌರ್ಜನ್ಯವಲ್ಲವೆಂದೂ ಅವರು ನುಡಿದರು. ಭಾರತದ ಸೈನಿಕರ ಅದರಲ್ಲಿಯೂ ಗೂರ್ಖಾಗಳ ತಾಳ್ಮೆ - ಸಂಯಮಗಳನ್ನು ಅವರು ಪ್ರಶಂಸಿಸಿ ತಮ್ಮ ಮೇಲೆ ಏಕಪ್ರಕಾರವಾಗಿ ಮರೆಗಳಿಂದ ಗುಂಡು ಹಾರಿಸಲಾಗುತ್ತಿದ್ದರೂ ಗೂರ್ಖಾಗಳು ಉಗ್ರ ಕದನವನ್ನೆಸಗಲು ನಿರಾಕರಿಸಿದರೆಂದು ತಿಳಿಸಿದರು.

ಮ್ಯಾಂಗನೀಸ್ ಅದುರಿನ ರಫ್ತು ಏರಿಕೆಗೆ ಕ್ರಮಗಳು
ನವದೆಹಲಿ, ಸೆ. 24
- ಮ್ಯಾಂಗನೀಸ್ ಅದುರಿನ ರಫ್ತನ್ನು ಹೆಚ್ಚಿಸಲೋಸುಗ ಸರ್ಕಾರವು ಸದ್ಯದಲ್ಲಿಯೇ ಕೆಲವು ರಿಯಾಯಿತಿಗಳನ್ನು ಪ್ರಕಟಿಸಿದೆ.
ಈ ರಿಯಾಯಿತಿಗಳು, ಗಣಿಗಳಿಂದ ಬಂದರುಗಳಿಗೆ ರೈಲುಗಳಲ್ಲಿ ಸಾಗಿಸಲಾಗಿರುವ ಅದುರಿನ ಸಾಗಣೆಯ ಶುಲ್ಕದ ಇಳಿತಾಯ ಹಾಗೂ ಗೌರವ ಧನಗಳು ಮತ್ತು ಬಂದರು ಶುಲ್ಕಗಳಲ್ಲಿನ ಕೆಲವು ಇಳಿತಾಯಗಳ ರೂಪದಲ್ಲಿರಬಹುದು.

ಇಂದು ನಗರದಲ್ಲಿ ದಕ್ಷಿಣ ವಲಯ ಸಮಿತಿ ಸಭೆ
ಬೆಂಗಳೂರು, ಸೆ. 24
- ಬೆಂಗಳೂರು ನಗರದಲ್ಲಿ ಇದೇ ಪ್ರಥಮವಾಗಿ ನಾಳೆ ಸಮಾವೇಶಗೊಳ್ಳಲಿರುವ ದಕ್ಷಿಣ ವಲಯ ಸಮಿತಿಯ ಮುಂದೆ ಅಂತರ ರಾಜ್ಯ ನದಿ ನೀರಿನ ಹಂಚಿಕೆ, ಗಡಿಗಳ ಹೊಂದಾಣಿಕೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ ಮೊದಲಾದ ಪ್ರಮುಖ ಪ್ರಶ್ನೆಗಳು ಚರ್ಚೆಗೆ ಬರಲಿವೆ.

ಮೈಸೂರು, ಕೇರಳ, ಮದ್ರಾಸು ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಂದ ಕೂಡಿರುವ ಈ ದಕ್ಷಿಣ ವಲಯ ಸಮಿತಿಯ ಕಲಾಪಗಳ ಪಟ್ಟಿಯಲ್ಲಿ ನದಿ ನೀರಿನ ಹಂಚಿಕೆ ಮತ್ತು ಗಡಿ ವಿವಾದಗಳ ಪ್ರಶ್ನೆ ಸೇರಿಲ್ಲ.
 
ಆದರೂ ಕಲಾಪಗಳ ಪಟ್ಟಿಯಲ್ಲಿ ಸೇರಿರುವ `ಇತರ ವಿಷಯಗಳ~ ಚರ್ಚೆಯಲ್ಲಿ ಈ ವಿಷಯಗಳ ಪ್ರಸ್ತಾಪವಾಗುವ ಸಂಭವ ಹೆಚ್ಚಾಗಿದೆಯೆನ್ನಲಾಗಿದೆ.

ಪಠ್ಯ ಪುಸ್ತಕಗಳ ಬಗ್ಗೆ ಸಂಶೋಧನೆಗಾಗಿ ಸಂಸ್ಥೆ
ಬೆಂಗಳೂರು, ಸೆ. 24
-  ಈಗಿರುವ ಪ್ರಾಥಮಿಕ ಪಾಠಕ್ರಮದ ಮೌಲ್ಯವನ್ನು ಪರಿಶೀಲಿಸಿ ಉತ್ತಮ ಪಠ್ಯ ಪುಸ್ತಕಗಳನ್ನು ತಯಾರಿಸುವುದಕ್ಕೆ ಸಹಾಯಕವಾಗುವಂತೆ ಒಂದು ಸಂಶೋಧನಾ ಸಂಸ್ಥೆಯನ್ನು ಆರಂಭಿಸಬೇಕೆಂದು ಇಂದು ಇಲ್ಲಿ ನಡೆದ ದಕ್ಷಿಣ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.