ADVERTISEMENT

ಭಾನುವಾರ, 30-10-1961

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ರಷ್ಯದಿಂದ 60 ಮೆಗಾಟನ್ ಬಾಂಬಿನ ಆಸ್ಫೋಟನೆ?
ಪ್ಯಾರಿಸ್, ಅ. 29 - ಅಕ್ಟೋಬರ್ 23 ರಂದು ಆಸ್ಫೋಟಿಸಲಾದ ನ್ಯೂಕ್ಲಿಯರ್ ಬಾಂಬಿನ ಸುಮಾರು ಎರಡರಷ್ಟು ಪ್ರಮಾಣದ ನ್ಯೂಕ್ಲಿಯರ್ ಬಾಂಬೊಂದನ್ನು ರಷ್ಯ ಇಂದು ಆಸ್ಫೋಟಿಸಿತೆಂದು ಫ್ರೆಂಚ್ ಅಣುಶಕ್ತಿ ಮಂಡಲಿಯ ಅಧಿಕಾರಿಗಳು ವರದಿ ಮಾಡಿದರು.

ರಷ್ಯವು ಅಕ್ಟೋಬರ್ 23 ರಂದು ಆಸ್ಫೋಟಿಸಿದ ನ್ಯೂಕ್ಲಿಯರ್ ಬಾಂಬಿನ ಪ್ರಮಾಣ ಸುಮಾರು ಮೂವತ್ತು ಮೆಗಾವಾಟ್‌ಗಳೆಂದು ಅಂದಾಜು ಮಾಡಲಾಗಿತ್ತು.

`ನಾವು ಸೋಮಾರಿ ಜನ~

ನವದೆಹಲಿ, ಅ. 29 - ಶಾಲಾ ಮಕ್ಕಳು ಸಮವಸ್ತ್ರ ಧರಿಸುವ ಅಗತ್ಯವನ್ನು ಇಲ್ಲಿ ಸಮಾವೇಶಗೊಂಡಿರುವ ವಿಶ್ವವಿದ್ಯಾಲಯ ಉಪಕುಲಪತಿಗಳ ಸಮ್ಮೇಳನದಲ್ಲಿ ಇಂದು ಒತ್ತಿ ಹೇಳಿದ ಪ್ರಧಾನ ಮಂತ್ರಿ ನೆಹರೂ ಅವರು, `ನಾವು - ಬಹುಮಂದಿ, ಸೋಮಾರಿ ಜನ, ಆದರೆ ಎಲ್ಲರೂ ಹಾಗಲ್ಲ~ ಎಂದರು.

`ಶಾಲಾ ಮಕ್ಕಳು ಸಮವಸ್ತ್ರ ಧರಿಸುವುದಕ್ಕೆ ನಾನು ಅತ್ಯಂತ ಮಹತ್ವ ನೀಡುತ್ತೇನೆ. ಇದು ಮಕ್ಕಳ ಮೇಲೆ ಮಾತ್ರವಲ್ಲ ಸಾರ್ವತ್ರಿಕವಾಗಿ ಜನತೆಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ~ ಎಂದರು.

ಉತ್ತಮ ಪಠ್ಯ ಪುಸ್ತಕಗಳನ್ನು ಸರ್ಕಾರವೇ ತಯಾರಿಸಲಿ
ನವದೆಹಲಿ, ಅ. 29 - ಲಕ್ಷಾಂತರ ಸಂಖ್ಯೆಯಲ್ಲಿ ಬಳಸಲ್ಪಡುವ ಪಠ್ಯ ಪುಸ್ತಕಗಳ ಉತ್ಪಾದನೆಯನ್ನು ಅತ್ಯುತ್ತಮ ಪ್ರತಿಭೆಯ ನೆರವಿನೊಡನೆ ಸರ್ಕಾರಿ ಉದ್ಯಮವೇ ನಿರ್ವಹಿಸುವುದು ಒಳ್ಳೆಯದೆಂದು ಪ್ರಧಾನ ಮಂತ್ರಿ ನೆಹರೂ ಇಂದು ಅಭಿಪ್ರಾಯಪಟ್ಟರು.

ಒಳ್ಳೆ ಪಠ್ಯ ಪುಸ್ತಕಗಳಿರಬೇಕಾದುದು ಬಹುಮಹತ್ವದ್ದೆಂದೂ, ಯಾವುದೇ ಜನ ಕೇವಲ ಹಣಗಳಿಸುವ ಆಸೆಯಿಂದ ಪಠ್ಯ ಪುಸ್ತಕಗಳ ಉತ್ಪಾದನೆಯ ದುರುಪಯೋಗ ಪಡೆಯಲು ಅವಕಾಶ ಕೊಡಬಾರದೆಂದು ನೆಹರೂ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಸಮ್ಮೇಳನದಲ್ಲಿ ಈ ಬೆಳಿಗ್ಗೆ ಮಾತನಾಡುತ್ತಾ ತಿಳಿಸಿದರು.

ತಂಡ್ಲಾ ಬಳಿ ರೈಲು ಅಪಘಾತ;19 ಜನರ ಸಾವು
ನವದೆಹಲಿ, ಅ. 29 - ಇಂದು ಬೆಳಿಗ್ಗೆ 10-45ರ ವೇಳೆಯಲ್ಲಿ ಮೈನ್‌ಪುರಿ ಮತ್ತು ಭೋಗಾನ್ ನಿಲ್ದಾಣಗಳ ನಡುವೆ ತಂಡ್ಲಾ - ಫರುಖಾಬಾದ್ ಪ್ರಯಾಣಿಕರ ರೈಲು ತಂಡ್ಲಾಗೆ 50 ಮೈಲಿ ದೂರದಲ್ಲಿ ಅಪಘಾತಕ್ಕೀಡಾಗಿ 19 ಮಂದಿ ಸತ್ತು, 6 ಜನರು ಗಾಯಗೊಂಡರೆಂದು ವರದಿಯಾಗಿದೆ.

ಎಂಜಿನ್ ಮತ್ತು ಮೂರು ಬೋಗಿಗಳು ಕಂಬಿ ತಪ್ಪಿದವು. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.