ಕೆ.ಜಿ.ಎಫ್. ಇಂಜಿನಿಯರಿಂದ ಕ್ರಾಂತಿಕಾರಕ ಸಾಧನ ನಿರ್ಮಾಣ
ರಾಬರ್ಟ್ಸನ್ಪೇಟೆ (ಕೆ.ಜಿ.ಎಫ್) ನ. 27– ಕೋಲಾರ ಬಂಗಾರದ ಗಣಿಯ ಕೇಂದ್ರ ಕಾರ್ಯಾಗಾರದ ಮುಖ್ಯ ಇಂಜಿನಿಯರ್ ಶ್ರೀ ವಿ.ಆರ್. ಸತ್ಯಬೋಧರಾವ್ ಅವರು ಗಣಿ ಕೆಲಸದಲ್ಲಿ ಕ್ರಾಂತಿಯೆಬ್ಬಿಸಬಹುದಾದಂಥ ಸಾಧನವೊಂದನ್ನು ಕಂಡುಹಿಡಿದಿದ್ದಾರೆ.
ಗಣಿಗಳ ಭೂಗರ್ಭದಲ್ಲಿ ಕಾರ್ಯಾಚರಣೆಯಲ್ಲಿರುವ ತೊಟ್ಟಿಲುಗಳಿಗೆ ಸಂಬಂಧಿಸಿದ ಯಂತ್ರದ ‘ಓವರ್ ವೈಂಡಿಂಗ್’ನ್ನು ಈ ಸಾಧನದಿಂದ ನಿಲ್ಲಿಸಬಹುದು. ಶ್ರೀ ರಾವ್ ಶೋಧನೆಯಿಂದ ತಯಾರಿಸಿದ ಒಟ್ಟು ನಲವತ್ತು ಯಂತ್ರಗಳನ್ನು ಗಣಿಗಳಲ್ಲಿ ಈಗ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.
ಭಾಷಾ ಶಾಸನಕ್ಕೆ ತಿದ್ದುಪಡಿ ಮಂಡನೆ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 27– ಇಂಗ್ಲೀಷ್ ಬಳಕೆಯನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಅಧಿಕೃತ ಭಾಷಾ ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು.
ದಿವಂಗತ ನೆಹರೂ ಹಾಗೂ ಶಾಸ್ತ್ರಿಯವರ ಆಶ್ವಾಸನೆಗಳಿಗೆ ಈ ಮಸೂದೆ ಶಾಸನಬದ್ಧ ಮಾನ್ಯತೆ ನೀಡುತ್ತದೆ. ಮಂಡನೆಯ ಘಟ್ಟದಲ್ಲಿಯೂ ಸಹ ಈ ಮಸೂದೆಗೆ ತೀವ್ರ ವಿರೋಧವಿತ್ತು. ಆದರೆ ಅದು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿರಲಿಲ್ಲ. ವಿರೋಧ ವ್ಯಕ್ತಪಡಿಸಿದವರು ಏಕೈಕ ಕಾಂಗ್ರೆಸ್ಸಿಗ ಸೇಠ್ ಗೋವಿಂದದಾಸ್, ಜನಸಂಘ ಮತ್ತು ಎಸ್.ಎಸ್.ಪಿ.
ಮಂಗಳೂರು ಬಂದರಿನ ಬಗ್ಗೆ ಡಾ. ರಾವ್ ಭರವಸೆ
ಬೆಂಗಳೂರು, ನ. 27– ಇನ್ನೆರಡು–ಮೂರು ತಿಂಗಳಲ್ಲಿ ಕೇಂದ್ರದ ಮಂತ್ರಿ ಮಂಡಲ ಮಂಗಳೂರು ಬಂದರು ಅಭಿವೃದ್ಧಿ ಯೋಜನೆಗೆ ಮಂಜೂರಾತಿಯನ್ನು ನೀಡುವ ಭರವಸೆಯನ್ನು ಕೇಂದ್ರದ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.