ಕಾಶ್ಮೀರದ ರಾಜಕೀಯ ಸ್ಥಾನಮಾನದ ಬಗ್ಗೆ ಯಾರ ಜೊತೆಯೂ ಚರ್ಚೆ ಇಲ್ಲ
ನವದೆಹಲಿ, ಮಾ. 21– ಕಾಶ್ಮೀರ ಭಾರತದ ಭಾಗವಾಗಿರುವುದರಿಂದ ಅದರ ರಾಜಕೀಯ ಸ್ಥಾನಮಾನ ಕುರಿತು ಸರಕಾರವು ಯಾರೊಡನೆಯೂ ಚರ್ಚೆ ನಡೆಸುವುದಿಲ್ಲ ಎಂದು ಕೇಂದ್ರ ಗೃಹಖಾತೆ ಸ್ಟೇಟ್ ಸಚಿವ ಶ್ರೀ ವಿ.ಸಿ. ಶುಕ್ಲಾ ಅವರು ಇಂದು ಲೋಕಸಭೆಗೆ ತಿಳಿಸಿದರು.
ಕಾಶ್ಮೀರದ ರಾಜಕೀಯ ಸ್ಥಾನಮಾನ ಕುರಿತು ಜಗತ್ತಿನ ನಾನಾ ರಾಜಧಾನಿಗಳಲ್ಲಿ ಚರ್ಚೆ ನಡೆಸುವ ಭಾರತ ಸರಕಾರದ ಹವ್ಯಾಸವು ಜಮ್ಮು–ಕಾಶ್ಮೀರದ ಜನರ ಮನಸ್ಸಿನಲ್ಲಿ ಅಭದ್ರತೆಯನ್ನು ಮೂಡಿಸಿದೆ ಎಂದು ಶ್ರೀ ಹೇಮಬರವಾ ಹಾಗೂ ಶ್ರೀ ಕೆ.ಎಲ್. ಗುಪ್ತಾ ಅವರು ದೂರಿದ್ದರು.
ಏಪ್ರಿಲ್ 1ರಿಂದ ಬೃಂದಾವನ್ ಎಕ್ಸ್ಪ್ರೆಸ್ ವೇಗ ಮತ್ತಷ್ಟು ಹೆಚ್ಚು
ಮದರಾಸ್, ಮಾ. 21– ಮದರಾಸ್–ಬೆಂಗಳೂರು ನಡುವೆ ಓಡಾಡುವ ಬೃಂದಾವನ್ ಎಕ್ಸ್ಪ್ರೆಸ್ ವೇಗವನ್ನು ಮುಂದಿನ ತಿಂಗಳಿಂದ ಹೆಚ್ಚಿಸಲಾಗುವುದು. ಇದರಿಂದಾಗಿ ಈಗ ಇರುವ ಸಂಚಾರದ ಅವಧಿ ಎಂದರೆ 5 ಗಂಟೆ 25 ನಿಮಿಷಗಳಲ್ಲಿ 15 ನಿಮಿಷ ಕಡಿಮೆಯಾಗುವುದು. ಎಕ್ಸ್ ಪ್ರೆಸ್ ಟ್ರೈನ್ ಜಾಲಾರಪೇಟೆ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಚೀಫ್ ಆಪರೇಟಿಂಗ್ ಸೂಪರಿಂಟೆಂಡೆಂಟ್ ಶ್ರೀ ಸಾಲ್ಡಾನಾ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.