ADVERTISEMENT

ಸೋಮವಾರ, 5–5–1969

ಸೋಮವಾರ

​ಪ್ರಜಾವಾಣಿ ವಾರ್ತೆ
Published 4 ಮೇ 2019, 18:46 IST
Last Updated 4 ಮೇ 2019, 18:46 IST

ಅಗಲಿದ ರಾಷ್ಟ್ರಪತಿಗೆ 5 ಲಕ್ಷಕ್ಕೂ ಹೆಚ್ಚು ಜನರ ಶ್ರದ್ಧಾಂಜಲಿ

ನವದೆಹಲಿ, ಮೇ 4– ಭವ್ಯವಾದ ರಾಷ್ಟ್ರಪತಿ ಭವನದ ಉನ್ನತ ಗೋಪುರದ ಶ್ವೇತಮುಖಿ ಹಜಾರ್ ದರ್ಬಾರ್‌ ಸಭಾಂಗಣದಲ್ಲಿಡಲಾಗಿರುವ ದಿವಂಗತ ರಾಷ್ಟ್ರಪತಿ ಡಾ. ಜಾಕಿರ್ ಹುಸೇನರ ಪಾರ್ಥಿವ ಶರೀರದ ಮುಂದೆ ಇಂದು ಸಂಜೆ ಹೊತ್ತಿಗೆ ಐದು ಲಕ್ಷಕ್ಕೂ ಹೆಚ್ಚು ಶೋಕತಪ್ತ ಜನ ಹಾದುಹೋಗಿ ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಆಗಲಿದ ರಾಷ್ಟ್ರ ನಾಯಕನ ಅಂತಿಮ ದರ್ಶನಕ್ಕಾಗಿ ಸಹಸ್ರರು ಮಂದಿ ಸಾಲುಗಟ್ಟಿ ನಿಂತಿದ್ದರು.

ನಾಳೆ ಸಂಜೆ 5 ಗಂಟೆ ಹೊತ್ತಿಗೆ ಡಾ.ಜಾಕಿರ್ ಹುಸೇನ್‌ರವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗುವ ಮುನ್ನ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಗೌರವವನ್ನು ಅರ್ಪಿಸುವ ನಿರೀಕ್ಷೆಯಿದೆ.

ADVERTISEMENT

‘ಮಾನವತಾವಾದಿ, ವಿಶಿಷ್ಟ ವ್ಯಕ್ತಿ’ ಜಾಕಿರ್ ಹುಸೇನ್‌ರಿಗೆ ವಿದೇಶ ಮುಖ್ಯರ ಸಂತಾಪ

ನವದೆಹಲಿ, ಮೇ 4– ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರ ನಿಧನಕ್ಕೆ ವಿದೇಶ ನಾಯಕರು ತಮ್ಮ ರಾಷ್ಟ್ರದ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ರಷ್ಯದ ಅಧ್ಯಕ್ಷ ನಿಕೋಲಾಯ್ ಪೋಡ್ಲೋರ್ನಿ ಮತ್ತು ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಶೋಕ ಸಂದೇಶ ಕಳುಹಿಸಿದ್ದಾರೆ.

ಪೋಡ್ಲೋರ್ನಿ ಅವರು ಡಾ. ಹುಸೇನ್ ಅವರನ್ನು ಭಾರತದ ವಿಶಿಷ್ಟ ವ್ಯಕ್ತಿ ಎಂದು ಕರೆದಿದ್ದಾರೆ. ನಿಕ್ಸನ್ ಅವರು ‘ದಿಟ್ಟತನದ ವ್ಯಕ್ತಿ’ ಎಂದಿದ್ದಾರೆ.

ರಾಜ್ಯದಿಂದ ಅಗರು ಬತ್ತಿ ಶ್ರೀಗಂಧ

ನವದೆಹಲಿ, ಮೇ 4– ಮೈಸೂರಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಡಾ. ಹುಸೇನರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಳಸುವ ಸಲುವಾಗಿ ಮೈಸೂರಿನಿಂದ ವೈಶಿಷ್ಟ್ಯ ಪೂರ್ಣವಾದ ಅಗರುಬತ್ತಿಗಳನ್ನೂ ಶ್ರೀಗಂಧದ ಚಕ್ಕೆಪುಡಿಯನ್ನೂ ತಂದಿದ್ದಾರೆ.

ನಿನ್ನೆ ಬೆಂಗಳೂರಿನಿಂದ ವಿಮಾನದಲ್ಲಿ ಇಲ್ಲಿಗೆ ಆಗಮಿಸಿದ ಶ್ರೀ ಪಾಟೀಲರು ವಿಮಾನ ನಿಲ್ದಾಣದಿಂದ ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ಡಾ. ಹುಸೇನರ ಪಾರ್ಥಿವ ಶರೀರದ ಬಳಿ ಪುಷ್ಪಗುಚ್ಚವನ್ನು ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.