ADVERTISEMENT

ಶುಕ್ರವಾರ, 2–5–1969

​ಪ್ರಜಾವಾಣಿ ವಾರ್ತೆ
Published 1 ಮೇ 2019, 18:30 IST
Last Updated 1 ಮೇ 2019, 18:30 IST

ರಷ್ಯ, ಅಮೆರಿಕಗಳಿಂದ ಭಾರತಕ್ಕೆ ಅಣ್ವಸ್ತ್ರ ರಕ್ಷಣೆ ಅನಗತ್ಯ: ಇಂದಿರಾ

ನವದೆಹಲಿ, ಮೇ 1– ಚೀನದಿಂದ ಉಂಟಾಗುವ ಯಾವುದೇ ಅಣ್ವಸ್ತ್ರ ಬೆದರಿಕೆಯ ವಿರುದ್ಧ ತನಗೆ ’ಅಣ್ವಸ್ತ್ರ ರಕ್ಷಣೆ’ ಬೇಕೆಂದು ಭಾರತವು ರಷ್ಯ ಹಾಗೂ ಅಮೆರಿಕಗಳನ್ನು ಕೇಳಬೇಕು ಎಂಬ ಕಾಂಗ್ರೆಸ್ ಸದಸ್ಯ ಶ್ರೀ ಆರ್.ಟಿ. ಪಾರ್ಥಸಾರಥಿ ಅವರ ಸೂಚನೆಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಯಲ್ಲಿ ತಿರಸ್ಕರಿಸಿದರು.

ಅದರಿಂದ ಭಾರತಕ್ಕೆಹಿತ ಉಂಟಾಗುತ್ತದೆ ಎಂದು ತಾವು ಭಾವಿಸುವುದಿಲ್ಲವೆಂದೂ ಪ್ರಧಾನಿಯವರು ಹೇಳಿದರು.

ADVERTISEMENT

ಚೀನವು ಅಣ್ವಸ್ತ್ರ ದಾಳಿ ನಡೆಸಿದರೆ ದೇಶವನ್ನು ರಕ್ಷಿಸುವ ಸಾಮರ್ಥ್ಯ ತಮಗಿದೆ ಎಂಬ ಬಗ್ಗೆ ಪ್ರಧಾನಿಯವರು ಆಶ್ವಾಸನೆ ಕೊಡುವರೆ ಎಂದು ಶ್ರೀಮತಿ ಗಾಂಧಿಯವರನ್ನು ಕೇಳಿದರು ಶ್ರೀ ಮನ್‌ಸಿಂಗ್.

ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆದರೆ ಅದು ಭಾರತ ಮತ್ತು ಚೀನಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲವೆಂದೂ, ಇಡೀ ಜಗತ್ತೇ ಅದರಲ್ಲಿ ಒಳಗೊಳ್ಳುವುದೆಂದೂ, ಅದರಿಂದ ಪರಿಸ್ಥಿತಿಯೇ ಬದಲಾಗುವುದೆಂದೂ ಉತ್ತರವಿತ್ತ ಶ್ರೀಮತಿ ಗಾಂಧಿಯವರು, ‘ಈ ಎಲ್ಲ ವಿಷಯಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ ಎಂದುಹೇಳಲಿಚ್ಛಿಸುತ್ತೇನೆ’ ಎಂದರು.

4 ವರ್ಷಗಳಲ್ಲಿ ನಗರಕ್ಕೆ ಕಾವೇರಿ ನೀರು

ಬೆಂಗಳೂರು, ಮೇ 1– ಇನ್ನು ನಾಲ್ಕು ವರ್ಷಗಳಲ್ಲಿ ನಗರಕ್ಕೆ ಕಾವೇರಿ ನೀರು ಸರಬರಾಜಾಗುವ ನಿರೀಕ್ಷೆಯಿದೆ.

ಕಾವೇರಿ ಯೋಜನೆಯ ಪ್ರಥಮ ಹಂತದ ಕಾರ್ಯವನ್ನು ಸ್ಥಳೀಯ ಸಂಪನ್ಮೂಲಗಳ ನೆರವಿನಿಂದಲೇ ಆರಂಭಿಸಲು ಜಲಮಂಡಳಿ ನಿನ್ನೆ ನಿರ್ಧರಿಸಿತು.

ಅದರ ಅಂದಾಜು ವೆಚ್ಚ ಸುಮಾರು 22.32 ಕೋಟಿ ರೂ. ಅದು ಪೂರೈಸಿದ ನಂತರ ನಗರದ ತಲಾ ನೀರು ಪೂರೈಕೆ ಪ್ರಮಾಣವು 11 ಗ್ಯಾಲನ್‌ಗಳಿಂದ 22 ಗ್ಯಾಲನ್‌ಗಳಿಗೆ ಏರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.