ರಾಜ್ಯಸಭೆ: ಇಬ್ರಾಹಿಂ ಬದಲು ರೆಹಮಾನ್ ಖಾನ್– ಮೂರ್ತಿ, ಪೂಜಾರಿ, ಅನಂತನಾಗ್ ಸೇರಿ ಎಂಟು ನಾಮಪತ್ರ ಸಲ್ಲಿಕೆ
ಬೆಂಗಳೂರು, ಜ. 22– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರುವರಿ ಹದಿನೇಳರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕಾಂಗ್ರೆಸ್ನಿಂದ ಎಂ. ರಾಜಶೇಖರಮೂರ್ತಿ, ಎಚ್. ಹನುಮಂತಪ್ಪ, ಜನಾರ್ದನ ಪೂಜಾರಿ, ಕೆ. ರೆಹಮಾನ್ಖಾನ್, ಜನತಾದಳದಿಂದ ಅನಂತನಾಗ್ ಸೇರಿದಂತೆ ಎಂಟು ನಾಮಪತ್ರಗಳನ್ನು ಸಲ್ಲಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಟಿ.ಡಿ.ಆರ್. ಹರಿಶ್ಚಂದ್ರ, ಎಚ್. ಅಬ್ದುಲ್ ವಾಹಬ್ ಮತ್ತು ಪಕ್ಷೇತರರಾಗಿ ವೀರೇಂದ್ರ ಎಂ. ಟ್ರೆಹಾನ್ ಅವರು ನಾಮಪತ್ರ ಸಲ್ಲಿಸಿರುವ ಇತರರು.
ಕಾಂಗ್ರೆಸ್ ಪಕ್ಷ ಪ್ರಕಟಿಸಿದ್ದ ಮೊದಲ ಪಟ್ಟಿಯಲ್ಲಿ ನಾಲ್ಕನೆಯ ಅಭ್ಯರ್ಥಿಯಾಗಿ ಸಿ.ಎಂ. ಇಬ್ರಾಹಿಂ ಹೆಸರು ಇತ್ತಾದರೂ ಪಕ್ಷದಲ್ಲಿ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅವರ ಬದಲು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಕೆ. ರೆಹಮಾನ್ ಖಾನ್ ಅವರು ನಾಲ್ಕನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಶೇಷನ್ ನಿಲುವಿಗೆ ಅಡ್ವಾಣಿ ಪ್ರಶಂಸೆ
ಬೆಂಗಳೂರು, ಜ. 22– ದೇಶದ ಎಲ್ಲ ಮತದಾರರಿಗೂ ಅವರ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು 1995ರ ಜನವರಿ 1ರ ಮುನ್ನ ಪೂರೈಸುವ ಪ್ರಧಾನ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ದೃಢ ಸಂಕಲ್ಪವನ್ನು ಬಿಜೆಪಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಇಂದು ಇಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.