ಎರಡು ಚಿತ್ರಮಂದಿರಗಳಲ್ಲಿ ಸ್ಫೋಟ: ಒಬ್ಬನ ಸಾವು
ಬೆಂಗಳೂರು, ಅ. 11– ಕಳೆದ ನಾಲ್ಕು ದಿನಗಳಿಂದ ಬೆಂಕಿ, ಲೂಟಿ, ಇರಿತದ ನೆರಳಲ್ಲಿ ನಲುಗಿದ ಬೆಂಗಳೂರು ನಗರದಲ್ಲಿ ಇಂದು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ದಂಡು ಪ್ರದೇಶದಲ್ಲಿನ ಚಿತ್ರಮಂದಿರವೊಂದರಲ್ಲಿ ಸಂಜೆ ಸಿನಿಮಾ ಪ್ರದರ್ಶನವಾಗುತ್ತಿದ್ದಾಗ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಯುವಕನೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡರು. ಮೆಜೆಸ್ಟಿಕ್ ಪ್ರದೇಶದ ನರ್ತಕಿ ಚಿತ್ರಮಂದಿರದಲ್ಲೂ ಸ್ಫೋಟ ಸಂಭವಿಸಿದೆ.
ಗಲಭೆಪೀಡಿತ ಬ್ಯಾಟರಾಯನಪುರ, ಜಗಜೀವನರಾಂನಗರ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರಕ್ಷುಬ್ಧಗೊಂಡಿದ್ದ ಕೆಲವು ಪ್ರದೇಶಗಳಲ್ಲಿ ಜನಜೀವನ ಮಾಮೂಲು ಸ್ಥಿತಿಗೆ ಮರಳಿದೆ. ಆದರೆ ನಗರದಲ್ಲಿ ಸಂಭವಿಸಿರುವ ಹಿಂಸಾಚಾರಕ್ಕೂ ಈ ಸ್ಫೋಟಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮುಂದೆ ತಿಳಿಸುವವರೆಗೆ ಉರ್ದು ವಾರ್ತೆ ಇಲ್ಲ: ಕೋರ್ಟ್ಗೆ ಮುಚ್ಚಳಿಕೆ
ಬೆಂಗಳೂರು, ಅ. 11– ಬೆಂಗಳೂರು ದೂರದರ್ಶನ ಕೇಂದ್ರದಿಂದ ಮುಂದೆ ತಿಳಿಸುವವರೆಗೆ ಉರ್ದು ವಾರ್ತೆ ಪ್ರಸಾರ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಹೈಕೋರ್ಟಿನಲ್ಲಿ ಮುಚ್ಚಳಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.