ಕಾಫಿ ಬೆಳೆಗಾರರ ಸಮಸ್ಯೆ ಪರಿಶೀಲನೆ
ನವದೆಹಲಿ, ಡಿ. 12– ಕರ್ನಾಟಕದ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದಾಗಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹೇಳಿದ್ದಾರೆ.
ಸಂಸತ್ ಸದಸ್ಯೆ ಡಿ.ಕೆ. ತಾರಾದೇವಿ ಅವರ ನೇತೃತ್ವದಲ್ಲಿ ಇಂದು ಅವರನ್ನು ಭೇಟಿಯಾದ ಕರ್ನಾಟಕ ಕಾಫಿ ಬೆಳೆಗಾರರ ನಿಯೋಗವೊಂದಕ್ಕೆ ಪ್ರಧಾನಿಯವರು ಈ ಆಶ್ವಾಸನೆ ನೀಡಿದ್ದಾರೆ.
ಮಾನ್ಯತಾ ಮಂಡಲಿ
ವಿಜಯವಾಡ, ಡಿ. 12 (ಪಿಟಿಐ)– ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ವಿವಿಧ ವಿಭಾಗಗಳ ಗುಣಮಟ್ಟ ಕುರಿತು ಶ್ರೇಣಿ ನೀಡುವುದಕ್ಕಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಸ್ಥಾಪಿಸಲು ಇಚ್ಛಿಸಿರುವ ಮಾನ್ಯತಾ ಮಂಡಲಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ ಎಂದು ಆಯೋಗದ ಅಧ್ಯಕ್ಷ ಪ್ರೊ. ಜಿ. ರಾಮರೆಡ್ಡಿ ಇಂದು ಇಲ್ಲಿ ತಿಳಿಸಿದರು.
ಭಟ್ಕಳ ಗಲಭೆ ನ್ಯಾಯಾಂಗ ತನಿಖೆ
ಕಾರವಾರ, ಡಿ. 12– ಭಟ್ಕಳ ಕೋಮು ಗಲಭೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಅವರ ನೇತೃತ್ವದ ಆಯೋಗ ಶೀಘ್ರದಲ್ಲೇ ನ್ಯಾಯಾಂಗ ತನಿಖೆ ಪ್ರಾರಂಭಿಸುವುದು. ಈ ಸಂಬಂಧ ಜಗನ್ನಾಥ ಶೆಟ್ಟಿ ಅವರು ಕಾರವಾರ, ಹೊನ್ನಾವರ ಮತ್ತು ಭಟ್ಕಳಗಳಿಗೆ ಇಂದು ಭೇಟಿ ನೀಡಿದ್ದರು.
ಪಂಥ ಹೂಡುವ ಸನ್ನಾಹ...
ಬೆಂಗಳೂರು, ಡಿ. 12– ‘ರಾಷ್ಟ್ರೀಯ ವಾಹಿನಿಯ (ಕಾಂಗ್ರೆಸ್ ಪಕ್ಷ) ವಿರುದ್ಧ ಪಂಥ ಹೂಡುವ, ಚಳವಳಿ ನಡೆಸುವ ಹಾಗೂ ಹೊಸ ಪಕ್ಷ ಕಟ್ಟುವ ಸನ್ನಾಹ ಕರ್ನಾಟಕ ರಾಜ್ಯದಲ್ಲಿ ಸಫಲವಾಗುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.