ರೂ. 500 ಕೋಟಿ ವಿಶೇಷ ನೆರವಿಗೆ ರಾಜ್ಯದ ಮನವಿ
ನವದೆಹಲಿ, ಫೆ. 27– ಎರಡು ಸಾವಿರನೇ ಇಸವಿಯೊಳಗೆ ಕರ್ನಾಟಕವು ಕೃಷ್ಣಾ ನದಿ ನೀರಿನಲ್ಲಿ ತನ್ನ ಪಾಲನ್ನು ಪೂರ್ಣವಾಗಿ ಬಳಸಿಕೊಳ್ಳಬೇಕಾಗಿರುವುದರಿಂದ ಕೃಷ್ಣಾ ಕಣಿವೆಯ ಯೋಜನೆಗಳನ್ನು ನಿಗದಿತ ವೇಳೆಯಲ್ಲಿ ಪೂರೈಸಲು ಸಹಾಯವಾಗುವಂತೆ ರೂ 500 ಕೋಟಿಯನ್ನು ಕೇಂದ್ರದ ವಿಶೇಷ ನೆರವಾಗಿ, ಇಲ್ಲವಾದರೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ನೆರವನ್ನಾಗಿ ನೀಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರವನ್ನು ಆಗ್ರಹಪಡಿಸಿದೆ.
ಡಕಾಯಿತಿ ತಡೆಗೆ ಕಂಡಲ್ಲಿ ಗುಂಡಿಕ್ಕಲು ಆದೇಶ
ಬೀದರ್, ಫೆ. 27– ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಮನ್ನಾಯೆಖೆಳ್ಳಿ ಬಳಿ ಮೊನ್ನೆ ರಾತ್ರಿ ಸಂಭವಿಸಿದ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಶಂಕಾಸ್ಪದವಾಗಿ ರಾತ್ರಿ ವೇಳೆಯಲ್ಲಿ ವಾಹನಗಳನ್ನು ತಡೆಯುವವರ ಮೇಲೆ ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ನೀಡಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಪದಮ್ ಕುಮಾರ್ ಗರ್ಗ್ ಅವರು ಇಂದು ಇಲ್ಲಿ ತಿಳಿಸಿದರು.
ದೇಶದ ವಿದೇಶಿ ವಿನಿಮಯ 60,000 ಕೋಟಿ
ತಿರುಚಿರಾಪಳ್ಳಿ, ಫೆ. 27 (ಪಿಟಿಐ)– ಭಾರತದ ವಿದೇಶಿ ವಿನಿಮಯ ಈಗ 60,000 ಕೋಟಿ ರೂಪಾಯಿಯ ಗಡಿಯನ್ನು ತಲುಪಿದೆ.
ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಪಿ.ಚಿದಂಬರಂ ಅವರು ಇಂದು ಇಲ್ಲಿ ಈ ವಿಷಯ ತಿಳಿಸಿದರು. ಸ್ವಾತಂತ್ರ್ಯಾನಂತರದ 48 ವರ್ಷಗಳ ಅವಧಿಯಲ್ಲಿ ಇಷ್ಟೊಂದು ಭಾರಿ ಮೊತ್ತದ ವಿನಿಮಯ ಸಂಗ್ರಹವಾಗಿರುವುದು ಇದೇ ಮೊದಲು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.