ಮುಕ್ತ ಅರ್ಥ ವ್ಯವಸ್ಥೆ ಮೊರಾರ್ಜಿ ಬೆಂಬಲ
ಮುಂಬೈ, ಫೆ. 26 (ಪಿಟಿಐ)– ಮುಕ್ತ ಆರ್ಥಿಕ ವ್ಯವಸ್ಥೆಯತ್ತ ದೇಶವು ಸಾಗುತ್ತಿರುವುದು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಸಂತಸ ಉಂಟು ಮಾಡಿದೆ. ಮುಕ್ತ ಅರ್ಥ ವ್ಯವಸ್ಥೆಯನ್ನು ತಾವು ಬಯಸುತ್ತಿರುವುದಾಗಿ ಮೊರಾರ್ಜಿ ಅವರು ತಿಳಿಸಿದರು.
ಮಂಗಳವಾರದಂದು 100ನೇ ವರ್ಷಕ್ಕೆ ಕಾಲಿಡುತ್ತಿರುವ ಅವರು ದಕ್ಷಿಣ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ದೇಶದ ಉದಾರ ಆರ್ಥಿಕ ನೀತಿಯನ್ನು ಬೆಂಬಲಿಸಿ ಮಾತನಾಡಿದರು. ಜವಾಹರಲಾಲ್ ನೆಹರೂ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ಅವರು, ತಾವು ಯಾವತ್ತೂ ಮುಕ್ತ ಅರ್ಥ ವ್ಯವಸ್ಥೆಯನ್ನು ಬೆಂಬಲಿಸಿರುವುದಾಗಿ ತಿಳಿಸಿದರು.
ಹತ್ತು ವಾಹನಗಳಿಗೆ ತಡೆ 15 ಲಕ್ಷ ರೂ. ಲೂಟಿ
ಬೀದರ್, ಫೆ. 26– ಹುಮನಾಬಾದ್ ತಾಲ್ಲೂಕಿನ ಮನ್ನಾಯೆಖೆಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ 15 ಮಂದಿ ಡಕಾಯಿತರ ತಂಡವೊಂದು ಒಂದಾದ ನಂತರ ಒಂದರಂತೆ ಒಟ್ಟು 10 ವಾಹನಗಳ ಮೇಲೆ ದಾಳಿ ನಡೆಸಿ ನಾಲ್ಕು ಜನರನ್ನು ಗಾಯಗೊಳಿಸಿದ್ದಲ್ಲದೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಹಣ ಮತ್ತು ಆಭರಣಗಳನ್ನು ದೋಚಿ ಪರಾರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.