ಬಿಹಾರ: ಜನತಾದಳ ಒಕ್ಕೂಟಕ್ಕೆ ಬಹುಮತ
ಪಟ್ನಾ, ಏ. 2 (ಪಿಟಿಐ)– ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಮತ್ತು ಅದರ ಮಿತ್ರಪಕ್ಷಗಳು ಈಗಾಗಲೇ 172 ಸ್ಥಾನ ಪಡೆದು ನಿಚ್ಚಳ ಬಹುಮತ ಗಳಿಸಿವೆ.
ಜನತಾದಳ ಶಾಸಕಾಂಗ ಪಕ್ಷದ (ಜೆಡಿಎಲ್ಪಿ) ಹೊಸ ನಾಯಕರಾಗಿ ನಾಳೆ ಮರು ಆಯ್ಕೆಯಾಗುವುದರೊಂದಿಗೆ ಲಲ್ಲೂ ಪ್ರಸಾದ್ ಯಾದವ್ ಅವರು ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.
ರಜೆ ದಿನ ಕೆಲಸ– ಹೆಚ್ಚು ವೇತನ
ಬೆಂಗಳೂರು, ಏ. 2– ಸಾರ್ವತ್ರಿಕ ರಜಾ ದಿನಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ನೀಡುತ್ತಿರುವ ವಾರ್ಷಿಕ 15 ದಿನಗಳ ಸಂಬಳವನ್ನು 30 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಪ್ರಕಟಿಸಿದರು.
ಕಂಪ್ಯೂಟರ್ಪ್ರಿಯ ನರಸಿಂಹ ರಾವ್
ನವದೆಹಲಿ, ಏ. 2 (ಪಿಟಿಐ)– ಪ್ರಧಾನಿ ನರಸಿಂಹರಾವ್ ಅವರ ಉಡುಗೆ ತೊಡುಗೆಯಿಂದ ಅವರೊಬ್ಬ ಹಳೆ ಕಾಲದ ಮನುಷ್ಯ ಎಂದು ಯಾರಾದರೂ ತಿಳಿದಿದ್ದರೆ ಖಂಡಿತವಾಗಿಯೂ ಅದು ಅವರ ಭ್ರಮೆ!
ಪಂಚೆ, ಧೋತಿ, ಅಂಗವಸ್ತ್ರ ಮತ್ತು ಆಧುನಿಕತೆಯ ಸಂಕೇತವಾದ ಕಂಪ್ಯೂಟರ್ ಸಮ್ಮಿಲನವನ್ನು ಸಾರುವ ಸಂಕೇತ– ಪಿ.ವಿ.ನರಸಿಂಹ ರಾವ್. ಅವರು ತಮ್ಮ ಪುಟ್ಟ ಕಂಪ್ಯೂಟರ್ ಸಹಾಯದಿಂದ 1980ರಿಂದಲೂ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.