ಅಣು ತಂತ್ರಜ್ಞಾನ ರಹಸ್ಯವರ್ಗಾವಣೆ– ಭಾರತ ಆತಂಕ
ನವದೆಹಲಿ, ಏ. 9 (ಯುಎನ್ಐ)– ಅಣ್ವಸ್ತ್ರಗಳಿಗೆ ಬೇಕಾದ ಪ್ಲುಟೋನಿಯಂ ಅನ್ನು ತಯಾರಿಸುವ ಸಾಮರ್ಥ್ಯವಿರುವ ಒಂದು ಪರಮಾಣು ಸ್ಥಾವರವನ್ನು ತಮ್ಮ ದೇಶ ಸ್ಥಾಪಿಸುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಒಪ್ಪಿಕೊಂಡಿರುವುದು, ಪರಮಾಣು ತಾಂತ್ರಿಕತೆ ವರ್ಗಾವಣೆಯನ್ನು ತಡೆಯಲು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವು ವಿಫಲವಾಗಿದೆ ಎಂಬ ಅಭಿಪ್ರಾಯವನ್ನು ದೃಢಪಡಿಸಿದೆ ಎಂದು ಭಾರತ ಇಂದು ಹೇಳಿದೆ.
ವಾಷಿಂಗ್ಟನ್ನಿಂದ ಬಂದ ವರದಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಅವರು, ಇದು ಪಾಕಿಸ್ತಾನದ ಮಿಲಿಟರಿ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಅಮುಲ್ ಸ್ವಾಧೀನಕ್ಕೆಗುಜರಾತ್ ಸರ್ಕಾರ ಸಜ್ಜು
ನವದೆಹಲಿ, ಏ. 9 (ಯುಎನ್ಐ)– ಏಷ್ಯಾದ ಬೃಹತ್ ಸಂಸ್ಥೆಯಾದ ಆನಂದ್ ಮೂಲದ ಹಾಲು ಸಹಕಾರಿ ಸಂಘ ‘ಅಮುಲ್’ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯನ್ನು ರದ್ದುಪಡಿಸಿ ರಾಜ್ಯ ಸರ್ಕಾರವೇ ವಹಿಸಿಕೊಳ್ಳಲು ಅವಕಾಶ ಮಾಡಿಕೊಡುವಂತಹ ಆದೇಶಗಳನ್ನು ಗುಜರಾತ್ ಸರ್ಕಾರ ನೀಡಿದೆ ಎಂದು ತಿಳಿದುಬಂದಿದೆ.
ಎರಡು ವರ್ಷಗಳಿಂದಲೂ ಆನಂದದ ಸಹಕಾರಿ ಸಂಸ್ಥೆಗಳಿಗೆ ಯಾವುದೇ ಚುನಾವಣೆ ನಡೆಯದಿರುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.