ಪಿಯುಸಿ ಪಠ್ಯಕ್ರಮ ಗೊಂದಲ– ಆತಂಕ
ಮಂಗಳೂರು, ಜೂನ್ 12– ಹೊಸ ಶೈಕ್ಷಣಿಕ ವರ್ಷದಿಂದ (1995–96) ಪದವಿ ಪೂರ್ವ ತರಗತಿಯ (ಪಿಯುಸಿ) ಮೊದಲ ವರ್ಷದ ಪಠ್ಯಕ್ರಮ (ಸಿಲೆಬಸ್) ಬದಲಾಗುವುದೇ ಎಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಇದುವರೆಗೆ ಕಾಲೇಜುಗಳಿಗೆ ಅಧಿಕೃತವಾಗಿ ಮಾಹಿತಿ ಕೊಡದ ಕಾರಣ ರಾಜ್ಯದಾದ್ಯಂತ ಸುಮಾರು ಎರಡೂವರೆ ಲಕ್ಷ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿದೆ.
ರಾಜ್ಯದಲ್ಲಿ ಸುಮಾರು ಎರಡು ಸಾವಿರ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಪಿಯುಸಿ ಮಂಡಲಿಯ ಅಧಿಕೃತ ಸೂಚನೆಯಂತೆ ಗುರುವಾರ (ಜೂನ್ 15) ಕಾಲೇಜುಗಳು ಪುನರಾರಂಭವಾಗಲಿದ್ದು ಇದುವರೆಗೆ ಪಠ್ಯಕ್ರಮ ಬದಲಾವಣೆಯ ಬಗ್ಗೆ ಮಂಡಲಿಯು ಕಾಲೇಜುಗಳಿಗೆ ಅಧಿಕೃತ ಸೂಚನೆ ನೀಡದಿರುವುದು ಹಾಗೂ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಪಠ್ಯಪುಸ್ತಕಗಳು ಹೊಸ ಪಠ್ಯಕ್ರಮಕ್ಕೆ ಅನ್ವಯವಾಗಿ ಇವೆಯೇ ಎಂದು ಗೊತ್ತಾಗದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭಾರೀ ಪೆಟ್ಟು ನೀಡಿದೆ.
ಬೆಳಿಗ್ಗೆ 3ರಿಂದ 5ರ ತನಕ ಲಾರಿ ಸಂಚಾರ ನಿಷೇಧ
ಬೆಂಗಳೂರು, ಜೂನ್ 12– ರಾಜ್ಯದಲ್ಲಿ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆವರೆಗೆ ಸರಕು ಸಾಗಣೆಯ ಭಾರೀ ವಾಹನಗಳ ಸಂಚಾರ ಮತ್ತು ಟ್ರೈಲರ್ ಬಳಸುವುದನ್ನು ತಕ್ಷಣದಿಂದ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಿನ ಜಾವದ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕ ಸುರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.