ಅರಣ್ಯ ಭೂಮಿ ಸಾಗುವಳಿ ಸಕ್ರಮ: ಕೇಂದ್ರದ ಅನುಮತಿ
ನವದೆಹಲಿ, ಜೂನ್ 10– ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಇತರ ಭೂಹೀನರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯನ್ನು ಹಿಡುವಳಿದಾರರಿಗೆ ಕಾಯಂ ಮಾಡಲು ಮಂಜೂರಾತಿ ನೀಡುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕಮಲ್ನಾಥ್ ಅವರು ಇಂದು ಭರವಸೆ ನೀಡಿದರೆಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ತಿಳಿಸಿದರು.
‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನವೇ ಈ ಬಡ ಕೃಷಿಕರು ಸುಮಾರು 30,000 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಇದಲ್ಲದೇ ಈಗ ಮತ್ತೆ ಸುಮಾರು 14 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಈ ವರ್ಗಗಳ ಜನರು ಸಾಗುವಳಿ ಮಾಡುತ್ತಿರುವುದರಿಂದ ಅವರನ್ನು ಒಕ್ಕಲೆಬ್ಬಿಸುವ ಬದಲು ಅವರಿಗೆ ಕಾಯಂ ಮಾಡಲು ಅವಕಾಶ ಕೊಡಬೇಕೆಂದು ಕೇಂದ್ರ ಸಚಿವರಿಗೆ ಅನೇಕ ಬಾರಿ ಮನವರಿಕೆ ಮಾಡಿಕೊಟ್ಟ ಪರಿಣಾಮ ಈಗ ಮಂಜೂರಾತಿಗೆ ಒಪ್ಪಿಗೆ ನೀಡಿದ್ದಾರೆ’ ಎಂದು ದೇವೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಿವಾರಿ ಬಣಕ್ಕೆ ಹಸ್ತ ಚಿಹ್ನೆ ಇಲ್ಲ
ನವದೆಹಲಿ, ಜೂನ್ 10 (ಪಿಟಿಐ)– ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಆಗಿ ತಮ್ಮ ಪಕ್ಷವನ್ನು ಮಾನ್ಯಮಾಡಬೇಕು ಎಂದು ಎನ್.ಡಿ.ತಿವಾರಿ– ಅರ್ಜುನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಬಣವು ಸಲ್ಲಿಸಿದ್ದ ಮನವಿಯನ್ನುಚುನಾವಣಾ ಆಯೋಗ ಇಂದು ತಳ್ಳಿಹಾಕಿದ್ದು ಹಸ್ತ ಚಿಹ್ನೆಯನ್ನು ನೀಡಲು ನಿರಾಕರಿಸಿದೆ. ಇದರಿಂದಾಗಿ ತಿವಾರಿ ಬಣವು ತೀವ್ರ ಹಿನ್ನಡೆ ಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.