ಹೆಗಡೆ ಮೂಲೆಗುಂಪಿಗೆ ಪಿತೂರಿ
ಬೆಂಗಳೂರು, ಫೆ. 21– ಪಕ್ಷದ ರಾಷ್ಟ್ರೀಯ ಮುಖಂಡರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ‘ಬದಿಗೆ ಸರಿಸಲು’ ಭಾರಿ ಪಿತೂರಿ ನಡೆಸುತ್ತಿದ್ದಾರೆ ಎಂದು ಜನತಾದಳ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಡಾ. ಜೀವರಾಜ ಆಳ್ವ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಿ.ಜಿ.ಆರ್. ಸಿಂಧ್ಯ ಅವರು ಇಂದು ಇಲ್ಲಿ ಆಪಾದಿಸಿದರು.
ಜನತಾದಳ ಕರ್ನಾಟಕದಲ್ಲಿ ಮಾತ್ರ ಮತ್ತೆ ಅಧಿಕಾರಕ್ಕೆ ಬರುವ ಸ್ಥಿತಿಯಲ್ಲಿದೆ. ಆದರೆ ರಾಷ್ಟ್ರೀಯ ಮಟ್ಟದ ಮುಖಂಡರಾದ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಸಯ್ಯದ್ ಷಹಬುದ್ದೀನ್ ಅವರು ಹೆಗಡೆ ಅವರ ವಿರುದ್ಧ ಹೇಳಿಕೆಗಳನ್ನು ಕೊಡುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಅವರು ನಿಲ್ಲಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಗಡಿ ವಿವಾದ: ಮಹಾರಾಷ್ಟ್ರ ‘ನಿರಾಸಕ್ತಿ’
ಬೆಳಗಾವಿ, ಫೆ. 21– ಉಭಯ ರಾಜ್ಯಗಳ ಗಡಿ ಪ್ರದೇಶಗಳ ಅಭಿವೃದ್ಧಿಗೆ ಧಕ್ಕೆ ಮಾಡಿ ಗಡಿ ವಿವಾದವನ್ನು ಬಗೆಹರಿಸುವುದರಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಇಂದು ಸಂಜೆ ಇಲ್ಲಿಗೆ ಹತ್ತಿರದ ಬೆಳಗುಂದಿಯಲ್ಲಿ ಹೇಳುವ ಮೂಲಕ, ಮೂರು ದಶಕಗಳಿಂದ ದೀರ್ಘವಾದ ಈ ವಿವಾದಕ್ಕೆ ಮಹಾರಾಷ್ಟ್ರ ಶಿಕ್ಷಣ ರಾಜ್ಯ ಸಚಿವ ಸದಾಶಿವರಾವ ಮಾಂಡಲೀಕ ಅವರು ಹೊಸ ತಿರುವು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.