ADVERTISEMENT

ಗುರುವಾರ, 2–6–1994

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 19:02 IST
Last Updated 1 ಜೂನ್ 2019, 19:02 IST

ನೌಕರರ ಸಂಬಳಕ್ಕೆ ರೈತರ ಸಾಲದ ಹಣ ಬಳಕೆ
ಬೆಂಗಳೂರು, ಜೂನ್ 1– ರೈತರು ಪಡೆದಿದ್ದ ಸಹಕಾರಿ ಸಾಲದ ಮರುಪಾವತಿ ಹಣವಾದ ಸುಮಾರು ನಲವತ್ತೈದು ಕೋಟಿ ರೂಪಾಯಿಗಳಷ್ಟು ಭಾರೀ ಮೊತ್ತ ಅನ್ಯ ಬಾಬ್ತಿಗೆ ವಿನಿಯೋಗವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೈತರಿಂದ ಮರುಪಾವತಿ ಆಗಿರುವ ಈ ಸಾಲದ ಹಣವನ್ನು ಸಹಕಾರ ಬ್ಯಾಂಕ್‌ಗಳಿಗೆ ಜಮಾ ಮಾಡುವ ಬದಲು ಕೃಷಿ ಸೇವಾ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಸಂಬಳ, ಪೀಠೋಪಕರಣ ಖರೀದಿ, ಕಚೇರಿ ಕಟ್ಟಡಗಳಿಗೆ ಬಳಸಿಕೊಂಡಿರುವುದಾಗಿ ಯೋಜನೆ ಮತ್ತು ಕಾಡಾ ಸಚಿವ ಕೆ.ಎಚ್. ಹನುಮೇಗೌಡ ಅವರು ಇಂದು ಇಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

ರಾಜೀನಾಮೆ ಅಂಗೀಕಾರಕ್ಕೇ ನಾಗೇಗೌಡ ಪಟ್ಟು
ಬೆಂಗಳೂರು, ಜೂನ್ 1– ಎಐಸಿಸಿ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವವರೆಗೂ ಸಚಿವ ಸ್ಥಾನದಲ್ಲಿ ಮುಂದುವರೆಯಬೇಕೆಂದು ರಾಜೀನಾಮೆ ಸಲ್ಲಿಸಿರುವ ಪಶುಸಂಗೋಪನಾ ಖಾತೆ ರಾಜ್ಯ ಸಚಿವ ಕೆ.ಎನ್. ನಾಗೇಗೌಡ ಅವರಿಗೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಸೂಚಿಸಿದ್ದಾರೆ.

ADVERTISEMENT

ಆದರೆ, ಮುಖ್ಯಮಂತ್ರಿ ಅವರ ಗೃಹ ಕಚೇರಿ ‘ಕೃಷ್ಣ’ದಲ್ಲಿ ಇಂದು ಬೆಳಿಗ್ಗೆ ಮೊಯಿಲಿ ಅವರನ್ನು ಭೇಟಿ ಮಾಡಿ ಬಂದ ಸಚಿವ ನಾಗೇಗೌಡ ಅವರು ‘ನನ್ನ ನಿಲುವಿನಲ್ಲಿ ಕಿಂಚಿತ್ತೂ ಬದಲಾವಣೆ ಇಲ್ಲ, ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿರುವುದರಿಂದ ಅಧಿಕಾರದಲ್ಲಿ ಮುಂದುವರೆಯಲು ಒತ್ತಾಯಿಸಬಾರದು ಎಂದು ಮುಖ್ಯಮಂತ್ರಿ ಅವರಿಗೆ ಕೋರಿದ್ದೇನೆ’ ಎಂದು ತಿಳಿಸಿದರು.

ಕಡಿಮೆ ಬೆಲೆಗೆ ಆನೆ ಮಾರಾಟ: ಸಚಿವರ ಸಮರ್ಥನೆ
ಮೈಸೂರು, ಜೂನ್ 1– ಮಠಗಳು ಮತ್ತು ದೇವಾಲಯಗಳು ಸೇರಿದಂತೆ ಖಾಸಗೀ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅರಣ್ಯ ಇಲಾಖೆಯ ಆನೆಗಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡುವುದನ್ನು ಅರಣ್ಯ ಸಚಿವ ಎಚ್. ವಿಶ್ವನಾಥ್ ಇಂದಿಲ್ಲಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.