ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಸರ್ಪಗಾವಲು: ಪಡೆಗಳು ಸಜ್ಜು
ಬೆಂಗಳೂರು, ಆ. 13– ರಾಷ್ಟ್ರಧ್ವಜ ಹಾರಿಸುವ ಬಿಜೆಪಿಯ ಯತ್ನವನ್ನು ತಡೆಗಟ್ಟಲು ಸೇನೆ ಹಾಗೂ ಪೊಲೀಸ್ ಸಿಬ್ಬಂದಿ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದ ಸುತ್ತ ಸರ್ಪಗಾವಲು ಹಾಕಿರುವ ನಡುವೆಯೇ, ಬಿಜೆಪಿಯ ರಾಷ್ಟ್ರೀಯ ಮುಖಂಡ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸಿಕಂದರ್ ಬಖ್ತ್ ಅವರೂ ಸೇರಿದಂತೆ 400ಕ್ಕೂ ಹೆಚ್ಚು ಕಾರ್ಯಕರ್ತರನ್ನು ರಾಜ್ಯದ ವಿವಿಧ ಕಡೆ ಬಂಧಿಸಲಾಯಿತು.
ಹುಬ್ಬಳ್ಳಿಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಖ್ತ್ ಅವರನ್ನು ವಶಕ್ಕೆ ಪಡೆಯಲಾಯಿತು.
ಆರ್ಎಸ್ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರ್ಧಾರ
ಬೆಂಗಳೂರು, ಆ. 13– ಸ್ವಾತಂತ್ರ್ಯ ದಿನದಂದು, ನಗರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ರಾಜ್ಯ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರದೇಶ ಜನತಾ ಪಕ್ಷ ನಿರ್ಧರಿಸಿದೆ.
ರಾಷ್ಟ್ರದ ಜನತೆ, ಸಂಘ–ಸಂಸ್ಥೆಗಳು ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜ ಹಾರಿಸಿ ಗೌರವ ಸಲ್ಲಿಸಿದರೆ, ಬಿಜೆಪಿಯ ಮಾತೃ ಸಂಘಟನೆ ಆರ್ಎಸ್ಎಸ್ ಮಾತ್ರ ತನ್ನ ಕಚೇರಿ–ಶಾಖೆಗಳಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿಲ್ಲ. ಆದ್ದರಿಂದ ಈ ಬಾರಿ ರಾಷ್ಟ್ರಧ್ವಜ ಹಾರಿಸಲು ಜನತಾ ಪಕ್ಷ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ. ಸುಬ್ಬಯ್ಯಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.