ADVERTISEMENT

ರಾಜ್ಯ ನೌಕರರ ಸಂಬಳ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 20:34 IST
Last Updated 22 ಡಿಸೆಂಬರ್ 2018, 20:34 IST

ರಾಜ್ಯ ನೌಕರರ ಸಂಬಳ ಏರಿಕೆ

ಬೆಂಗಳೂರು, ಡಿ. 22– ಸರ್ಕಾರಿ ನೌಕರರಿಗೆ ಸಂಬಂಧಿಸಿದ ನಾಲ್ಕನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಭಾಗಶಃ ಒಪ್ಪಿಕೊಂಡು, ಮೂಲ ವೇತನದಲ್ಲಿ ಶೇಕಡಾ 7.5ರಷ್ಟು ಹೆಚ್ಚಳ ಹಾಗೂ ಐದು ಸಾವಿರ ಸ್ಟೈಪೆಂಡಿಯರಿ ಪದವೀಧರರನ್ನು ಎರಡನೇ ದರ್ಜೆಯ ಗುಮಾಸ್ತರಾಗಿ ಸೇವೆಯಲ್ಲಿ ಕಾಯಂಗೊಳಿಸಲು ರಾಜ್ಯ ಸರ್ಕಾರ ಇಂದು ನಿರ್ಧರಿಸಿತು.

ವೇತನ ಹೆಚ್ಚಳ ಮುಂದಿನ ತಿಂಗಳು (ಜನವರಿ) ಒಂದರಿಂದ ಜಾರಿಗೆ ಬರುತ್ತದೆ. ಮಾರ್ಚ್‌ 31ರವರೆಗಿನ ಹೆಚ್ಚಳದ ಹಣವನ್ನು ರಾಷ್ಟ್ರೀಯ ಉಳಿತಾಯ ಪತ್ರಗಳ ರೂಪದಲ್ಲೂ, ಆ ನಂತರದ ಹಣವನ್ನು ನಗದಾಗಿಯೂ ನೀಡಲಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

**

ಭಿನ್ನ ಎಂಪಿಗಳಿಂದ ಮತ್ತೆ ಪ್ರಧಾನಿ ಭೇಟಿ

ನವದೆಹಲಿ, ಡಿ. 22– ಕರ್ನಾಟಕದ ಕಾಂಗೈ ಭಿನ್ನಮತೀಯ ಸಂಸತ್‌ ಸದಸ್ಯರ ನಿಯೋಗ ಇಂದು ಇಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಾಯಕತ್ವ ಬದಲಿಸುವಂತೆ ಮತ್ತೆ ಒತ್ತಾಯಿಸಿತು.

ವಾಸ್ತವವಾಗಿ ಈ ಸಂಸತ್‌ ಸದಸ್ಯರು ಮೊಯಿಲಿ ಅವರನ್ನು ಮುಂದುವರಿಸುವುದಾಗಿ ಪ್ರಧಾನಿ ಅವರು ಮೈಸೂರಿನಲ್ಲಿ ನೀಡಿದ ಸೂಚನೆ ಬಗ್ಗೆ ಸ್ಪಷ್ಟನೆ ಬಯಸಿದ್ದರು. ಆದರೆ ಪ್ರಧಾನಿ ರಾವ್‌ ಅವರು ಆ ವಿಷಯವನ್ನು ಪ್ರಸ್ತಾಪ ಮಾಡಲೇ ಇಲ್ಲ.

ಪ್ರಧಾನಿ ಅವರು ಬಂಗಾರಪ್ಪ ಅವರಿಗೆ ಸಂಬಂಧಿಸಿದ ವಿಷಯಕ್ಕೇ ಹೆಚ್ಚು ಒತ್ತು ನೀಡಿ ಕಾಂಗೈನಿಂದ ಮಾಜಿ ಮುಖ್ಯಮಂತ್ರಿಯ ಉಚ್ಚಾಟನೆ ಬಳಿಕ ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಗಮನ ನೀಡುವಂತೆ ಸಂಸತ್‌ ಸದಸ್ಯರಿಗೆ ಸೂಚಿಸಿದರು.

**

ಆಟೋ ಮಾಲೀಕರಿಗೆ ಮಾತ್ರ ಆದಾಯ ತೆರಿಗೆ

ಬೆಂಗಳೂರು, ಡಿ. 22– ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿರುವ ಹೊಸ ತೆರಿಗೆಯು ತಾವೇ ಚಾಲಕರೂ ಆಗಿರುವ ಆಟೋರಿಕ್ಷಾಗಳ ಮಾಲೀಕರಿಗೆ ಮಾತ್ರ ಅನ್ವಯಿಸಿದ್ದು, ತೆರಿಗೆ ಪಾವತಿ ಮಾಡುವ ಅಥವಾ ಬಿಡುವ ಆಯ್ಕೆ ಅವರ ಇಚ್ಛೆಗೆ ಬಿಟ್ಟಿದ್ದು ಎಂದು ಆದಾಯ ತೆರಿಗೆ ಇಲಾಖೆ ಮುಖ್ಯ ಕಮಿಷನರ್‌ ವಿ.ಆರ್‌. ನಾಯರ್‌ ಇಂದು ಇಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.