ಲೋಕಸಭೆ ವಿಸರ್ಜನೆ ಮಧ್ಯಂತರ ಚುನಾವಣೆ
ನವದೆಹಲಿ, ಏ. 26– ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆಗಳು ಪೂರ್ಣವಾಗಿ ವಿಫಲಗೊಂಡದ್ದರಿಂದ ಕೇಂದ್ರ ಸಂಪುಟದ ಶಿಫಾರಸಿನ ಮೇಲೆ ಹನ್ನೆರಡನೇ ಲೋಕಸಭೆಯನ್ನು ರಾಷ್ಟ್ರಪತಿ ಅವರು ಇಂದು ಸಂಜೆ ವಿಧ್ಯುಕ್ತವಾಗಿ ವಿಸರ್ಜಿಸಿದರು.
ಹನ್ನೊಂದನೇ ಲೋಕಸಭೆಯು ಹದಿನೆಂಟು ತಿಂಗಳಿಗೆ ವಿಸರ್ಜನೆಯಾದರೆ, ಅಲ್ಪಾಯುಷಿ ಹನ್ನೆರಡನೇ ಲೋಕಸಭೆಯು ಹದಿಮೂರು ತಿಂಗಳಿಗೆ ವಿಸರ್ಜನೆಗೊಂಡಿತು. ಈ ಸಂಬಂಧ ರಾಷ್ಟ್ರಪತಿ ಭವನದ ಪ್ರಕಟಣೆ ಸಂಜೆ ಹೊರಬಿದ್ದಿತು. ಇದರಿಂದ ಲೋಕಸಭೆಗೆ ಮತ್ತದೇ ಒಂದೂವರೆ ವರ್ಷದಲ್ಲಿಯೇ ಮಧ್ಯಂತರ ಚುನಾವಣೆ ಅನಿವಾರ್ಯವಾಗಿದೆ.
ವಿಸರ್ಜನೆಗೆ ಪ್ರತಿಪಕ್ಷಗಳ ಪರಸ್ಪರ ದೂಷಣೆ
ನವದೆಹಲಿ, ಏ. 26 (ಯುಎನ್ಐ, ಪಿಟಿಐ): ವಾಜಪೇಯಿ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಅಪರೂಪದ ‘ಏಕತೆ’ಯನ್ನು ತೋರಿದ ವಿರೋಧ ಪಕ್ಷಗಳು, ಈಗ ಲೋಕಸಭೆ ವಿಸರ್ಜನೆಯ ಹಿನ್ನೆಲೆಯಲ್ಲಿ ಪರಸ್ಪರ ದೂಷಿಸತೊಡಗಿವೆ.
ತಾನು ಪರ್ಯಾಯ ಸರ್ಕಾರ ರಚಿಸಲು ಸಾಧ್ಯವಾಗದ್ದಕ್ಕೆ ಕಾರಣ ಮುಲಾಯಂ ಸಿಂಗ್ ಎಂದು ಕಾಂಗ್ರೆಸ್ ದೂರಿದ್ದರೆ, ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಸಮಾಜವಾದಿ ಪಕ್ಷ, ಆರ್ಎಸ್ಪಿ ಹಾಗೂ ಫಾರ್ವರ್ಡ್ ಬ್ಲಾಕ್ ಕಾರಣ ಎಂದು ಸಿಪಿಎಂ ಮುಖಂಡ ಹರ್ಕಿಷನ್ ಸಿಂಗ್ ಸುರ್ಜಿತ್ ಆರೋಪಿಸಿದ್ದಾರೆ. ಈ ಪಕ್ಷಗಳ ‘ಜನಾಂಗೀಯ’ ನಿಲುವಿನಿಂದಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.