‘ಕಬ್ಬಿನ ಬೆಲೆಯಲ್ಲಿ ತಾರತಮ್ಯ ಬೇಡ’
ಬೆಂಗಳೂರು, ಮೇ 22– ‘ರಾಜ್ಯದ ಬೆಳಗಾವಿ, ವಿಜಾಪುರ, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳ ರೈತರು ಸರಬರಾಜು ಮಾಡುವ ಕಬ್ಬಿಗೆ ನಿಮ್ಮ ರಾಜ್ಯದ ರೈತರಿಗೆ ಕೊಡುವ ಬೆಲೆಯನ್ನೇ ಕೊಡಬೇಕು’ ಎಂದು ರಾಜ್ಯದ ಸಕ್ಕರೆ ಸಚಿವ ಎ.ಕೃಷ್ಣಪ್ಪ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
‘ಗಡಿ ಪ್ರದೇಶದಲ್ಲಿರುವ ನಿಮ್ಮ ರಾಜ್ಯದ ಸಕ್ಕರೆ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯ ಕೆಲವು ಭಾಗದಿಂದ ಕಳಿಸಿದ ಕಬ್ಬಿಗೆ ಹಾಗೂ ನಿಮ್ಮ ರಾಜ್ಯದ ರೈತರ ಕಬ್ಬಿಗೆ ಟನ್ ಒಂದಕ್ಕೆ ರೂ.700 ನೀಡಲಾಗುತ್ತಿದೆ. ಆದರೆ ವಿಜಾಪುರ, ಕಲ್ಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ರೈತರು ಕಳಿಸುವ ಕಬ್ಬಿಗೆ ರೂ. 550ರಿಂದ ರೂ. 600 ಮಾತ್ರ ನೀಡಲಾಗುತ್ತದೆ. ಈ ತಾರತಮ್ಯವನ್ನು ಹೋಗಲಾಡಿಸಿ ರೂ. 700 ಕೊಡಿಸಬೇಕು’ ಎಂದು ಕೃಷ್ಣಪ್ಪ ಪತ್ರದಲ್ಲಿ ಒತ್ತಾಯಿಸಿದ್ದಾರೆ.
***
ಆಲಮಟ್ಟಿ: ಮುಳುಗಡೆ ದಿನದ ನಿರೀಕ್ಷೆಯಲ್ಲಿ ಕೊಲ್ಹಾರ ಗ್ರಾಮಸ್ಥರು
ವಿಜಾಪುರ, ಮೇ 22– ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್ಗೆ ಏರಿಸಿ ಈ ಮಳೆಗಾಲದಲ್ಲಿ 173 ಟಿಎಂಸಿ ಅಡಿ ನೀರು ಸಂಗ್ರಹಿಸಲು ಭರದ ಸಿದ್ಧತೆ ನಡೆಯುತ್ತಿರು ವಂತೆಯೇ ಕೃಷ್ಣಾ ನದಿ ತೀರದ ಕೊಲ್ಹಾರ ಗ್ರಾಮಸ್ಥರು ತಮ್ಮ ಹೊಸ ನೆಲೆಗಾಗಿ ಚಡಪಡಿಸತೊಡಗಿದ್ದಾರೆ.
ಈವರೆಗೆ ಪ್ರತಿವರ್ಷ ಕೆಲ ಭಾಗಗಳು ಮಾತ್ರ ನೀರಿನಿಂದ ಆವೃತ್ತವಾಗುತ್ತಿದ್ದ ಈ ಗ್ರಾಮ, ಈ ಮಳೆಗಾಲದ ಬಳಿಕ ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರು ನಿಂತಾಗ ಸಂಪೂರ್ಣ ಮುಳುಗಡೆ ಆಗಲಿದೆ. ಇದರೊಂದಿಗೆ ಗ್ರಾಮದ ಈವರೆಗಿನ ಸಮೃದ್ಧ ಜೀವನ ಹೊಸ ತಿರುವು ಪಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.