ಹವಾಲ: ಸಿಬಿಐ ಕಾರ್ಯದಲ್ಲಿ ಹಸ್ತಕ್ಷೇಪ ಇಲ್ಲ– ಪಿವಿಎನ್
ನವದೆಹಲಿ, ಮಾರ್ಚ್ 8 (ಪಿಟಿಐ, ಯುಎನ್ಐ)– ಹವಾಲ ಪ್ರಕರಣದ ಬಗ್ಗೆ ಸಿಬಿಐ ನಡೆಸಿರುವ ತನಿಖೆಯಲ್ಲಿ ಸರ್ಕಾರ ಎಂಥದ್ದೇ ಸಂದರ್ಭದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ಇಂದು ಲೋಕಸಭೆಯಲ್ಲಿ ಘೋಷಿಸಿದರು.
ಈ ವಿಷಯದಲ್ಲಿ ಆರಂಭದಿಂದಲೂ ಸುಪ್ರೀಂ ಕೋರ್ಟ್ ನಿರ್ದೇಶನ
ದಲ್ಲಿಯೇ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ. ಕೆಲವನ್ನು ಮಾಡದಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಸಿಬಿಐ ಅದೇ ರೀತಿ ನಡೆದುಕೊಂಡಿದೆ, ಈಗಲೂ ನಡೆದುಕೊಳ್ಳುತ್ತಿದೆ ಮತ್ತು ಮುಂದೆಯೂ ನಡೆದುಕೊಳ್ಳುತ್ತದೆ. ಅಲ್ಲದೆ ಕಾನೂನಿನ ನಿಯಮಗಳನ್ನು ಸರ್ಕಾರ ಎಂದಿಗೂ ಮೀರುವುದಿಲ್ಲ ಎಂದು ಅವರು ಆಡಳಿತ ಪಕ್ಷದ ಸದಸ್ಯರ ಹರ್ಷೋದ್ಗಾರದ ಮಧ್ಯೆ ಸದನಕ್ಕೆ ಭರವಸೆ ನೀಡಿದರು.
ಸರ್ಪಕಾವಲಿನ ಮಧ್ಯೆ ಇಂದು ಕ್ರಿಕೆಟ್ ಪಂದ್ಯ
ಬೆಂಗಳೂರು, ಮಾರ್ಚ್ 8– ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇದೀಗ ಪೊಲೀಸರ ಸರ್ಪಕಾವಲು. ನಾಳೆ ಇಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ವಿಲ್ಸ್ ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ಫೈನಲ್ ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ.
ಈ ಕ್ರೀಡಾಂಗಣದ ಸುತ್ತಲೂ ಹೆಜ್ಜೆ ಹೆಜ್ಜೆಗೂ ಪೊಲೀಸರೇ. ಕ್ರೀಡಾಂಗಣದ ಒಳಾಂಗಣ ಕೂಡಾ ಇದಕ್ಕಿಂತ ಭಿನ್ನವಲ್ಲ.
ಶಿವಸೇನೆಯ ಬೆದರಿಕೆಯ ಹಿನ್ನೆಲೆಯಲ್ಲಿ, ಕ್ರಿಕೆಟ್ ತಂಡಗಳು ಇಳಿದುಕೊಂಡಿರುವ ಪಂಚತಾರಾ ಹೋಟೆಲ್ನಲ್ಲಿಯೇ ಕ್ಷಿಪ್ರ ಕಾರ್ಯಪಡೆಯ ಭದ್ರತೆ ಒದಗಿಸಲಾಗಿದೆ. ಈ ಹೋಟೆಲ್ನ ಎದುರು ಇದೀಗ ಎರಡು ಪೊಲೀಸ್ ವ್ಯಾನುಗಳನ್ನು ನಿಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.