ಕೋದಂಡರಾಮಯ್ಯ, ರಘುಪತಿಗೆ ಟಿಕೆಟ್: ತೀವ್ರ ವಿರೋಧ
ಬೆಂಗಳೂರು, ಮಾರ್ಚ್ 30– ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಂ.ರಘುಪತಿ ಹಾಗೂ ಚಿತ್ರದುರ್ಗದಿಂದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಪಿ.ಕೋದಂಡರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಜನತಾದಳದ ದೆಹಲಿ ವರಿಷ್ಠರು ಸೂಚನೆ ನೀಡಿದ್ದು, ಇದು ರಾಜ್ಯದ ದಳದ ಹಿರಿಯ ಮುಖಂಡರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಚಿವರು ಒಪ್ಪುತ್ತಿಲ್ಲವಾದ್ದರಿಂದ ಕನಿಷ್ಠ ಐದಾರು ಕ್ಷೇತ್ರಗಳಲ್ಲಿಯಾದರೂ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂಬ ಪ್ರಸ್ತಾಪವನ್ನು ದಳದ ಮುಖಂಡರು ಸದ್ಯಕ್ಕೆ ಕೈಬಿಟ್ಟಿದ್ದಾರೆ.
ಆದರೂ ಬೆಳಗಾವಿ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ಅವರನ್ನು ಸ್ಪರ್ಧೆಗಿಳಿಸುವ ಪ್ರಯತ್ನ ಇನ್ನೂ ಮುಂದುವರಿದಿದೆ.
ಉತ್ತರದಲ್ಲಿ ಜನತಾದಳ ಛಿದ್ರ: ಭಾರೀ ಪಕ್ಷತ್ಯಾಗ
ನವದೆಹಲಿ, ಮಾರ್ಚ್ 30 (ಯುಎನ್ಐ)– ಸಮಾಜವಾದಿ ಪಕ್ಷ– ಜನತಾದಳ ಮೈತ್ರಿ ಜನತಾದಳದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.
ಉತ್ತರಪ್ರದೇಶ, ದೆಹಲಿ ಮತ್ತು ಬಿಹಾರಗಳ ಪಕ್ಷದ ಘಟಕಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ಪಕ್ಷಾಂತರ ಮಾಡುತ್ತಿದ್ದಾರೆ.
ಕೇಂದ್ರ ಸಮಿತಿಯಿಂದ ತಮ್ಮ ಘಟಕ ಸ್ವತಂತ್ರವಾಗಿದೆ ಎಂದು ಉತ್ತರಪ್ರದೇಶದ ಜನತಾದಳ ಘಟಕ ಘೋಷಿಸಿಕೊಂಡ ಕೆಲವೇ ಗಂಟೆಗಳಲ್ಲಿ ಆ ಘಟಕವನ್ನು ವಿಸರ್ಜಿಸಿರುವುದಾಗಿ ದಳ ನಾಯಕರು ದೆಹಲಿಯಲ್ಲಿ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.