ಬೀದರ್ನಲ್ಲಿ ಕಲ್ಲು ತೂರಾಟ, ಲಾಠಿ ಪ್ರಹಾರ: 40 ಜನಕ್ಕೆ ಗಾಯ
ಬೀದರ್, ಮಾರ್ಚ್ 29– ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದೊಳಗೆ ಇಂದು ನುಗ್ಗಲು ಯತ್ನಿಸಿದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದಾಗ ಕೆಲವರು ಓಡಿದರೆ ಇನ್ನು ಕೆಲವರು ಕಲ್ಲು, ಚಪ್ಪಲಿ ತೂರಾಟದಲ್ಲಿ ತೊಡಗಿದರು. ಇದರಿಂದ 18 ಪೊಲೀಸರು ಸೇರಿ ಸುಮಾರು 40 ಜನರಿಗೆ ಗಾಯಗಳಾಗಿವೆ.
ಕಲ್ಲು ಮತ್ತು ಚಪ್ಪಲಿ ತೂರಾಟದ ಕಾಲಕ್ಕೆ ಸ್ಥಳದಲ್ಲೇ ಹಾಜರಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಲಾಠಿ ಪ್ರಹಾರಕ್ಕೆ ಆದೇಶ ನೀಡಲಿಲ್ಲ ಎಂದು ಸಿಟ್ಟಿಗೆದ್ದ ಪೊಲೀಸರು ನಂತರ ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡ ಅಪರೂಪದ ಘಟನೆ ನಡೆಯಿತು.
ಈ ಘಟನೆಯಿಂದ ನಗರದಲ್ಲಿ ಉಂಟಾ ಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಲ್ಲಿಕಾರ್ಜುನಯ್ಯ, ಆಳ್ವ, ಬಂಗಾರಪ್ಪ ನಾಮಪತ್ರ
ಬೆಂಗಳೂರು, ಮಾರ್ಚ್ 29– ಕೆಸಿಪಿ ಅಧ್ಯಕ್ಷ ಎಸ್.ಬಂಗಾರಪ್ಪ, ಜನತಾ ದಳದ ಬಾಗಿಲಲ್ಲಿ ನಿಂತಿರುವ ಡಾ. ಜೀವರಾಜ ಆಳ್ವ, ಲೋಕಸಭೆ ಉಪಾಧ್ಯಕ್ಷ ಎಸ್.ಮಲ್ಲಿಕಾರ್ಜುನಯ್ಯ, ಹಾಲಿ ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್, ಚಂದ್ರಪ್ರಭಾ ಅರಸ್, ಕೆ.ಎಚ್.ಮುನಿಯಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್, ದಳ ಮುಖಂಡರಾದ ಬಿ.ಎ.ಜೀವಿಜಯ, ಬಿ.ಎಲ್.ಶಂಕರ್ ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.
ಬಂಗಾರಪ್ಪ, ಅನಂತಕುಮಾರ್, ಜೀವಿಜಯ ಹಾಗೂ ಶಂಕರ್ ಅವರು ಕ್ರಮವಾಗಿ ಶಿವಮೊಗ್ಗ, ಬೆಂಗಳೂರು (ದಕ್ಷಿಣ), ಮಂಗಳೂರು ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಂದ ಚೊಚ್ಚಲ ಸ್ಪರ್ಧಿಗಳಾಗಿ ಕಣಕ್ಕೆ ಇಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.