ಕಾಂಗೈ ಮೊದಲ ಪಟ್ಟಿ ಬಿಡುಗಡೆ: ಅಂಬರೀಷ್, ಪೂಜಾರಿ, ಶ್ರೀಕಂಠಯ್ಯ, ತಾರಾದೇವಿಗೆ ಟಿಕೆಟ್
ನವದೆಹಲಿ, ಮಾರ್ಚ್ 28– ಕರ್ನಾಟಕದ 12 ಕ್ಷೇತ್ರಗಳ ಅಭ್ಯರ್ಥಿಗಳೂ ಸೇರಿದಂತೆ 92 ಜನರ ಮೊದಲ ಕಂತಿನ ಪಟ್ಟಿಯನ್ನು ಕಾಂಗೈ ಇಂದು ರಾತ್ರಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್, ಲೋಕಸಭಾ ಅಧ್ಯಕ್ಷ ಶಿವರಾಜ್ ಪಾಟೀಲ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಕೆಲವು ಸಚಿವರು ಸೇರಿದ್ದಾರೆ.
ಕರ್ನಾಟಕದ ಹನ್ನೆರಡು ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರಕ್ಕೆ ನಟ ಅಂಬರೀಷ್ ಅವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಹಳಬರು. ಕಳೆದ ಚುನಾವಣೆಯಲ್ಲಿ ಸೋತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಜನಾರ್ದನ ಪೂಜಾರಿ ಮತ್ತು ಎಚ್.ಸಿ.ಶ್ರೀಕಂಠಯ್ಯ ಅವರನ್ನು ಮತ್ತೆ ಅಭ್ಯರ್ಥಿಗಳನ್ನಾಗಿ ಆರಿಸಲಾಗಿದೆ.
ಚಂದ್ರೇಗೌಡ ಕಾಂಗೈಗೆ ದಳಕ್ಕೆ ಮಾರಕ ಪೆಟ್ಟು
ನವದೆಹಲಿ, ಮಾರ್ಚ್ 28– ಜನತಾ ದಳದ ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡ ಅವರು ಇಂದು ಹದಿನೈದು ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.
ಪಕ್ಷದ ವಕ್ತಾರ ವಿ.ಎನ್.ಗಾಡ್ಗೀಳ್ ಅವರು ಸಂಜೆ ಎಐಸಿಸಿ ಕಚೇರಿಯಲ್ಲಿ ತುರ್ತಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಂದ್ರೇಗೌಡ ಅವರು ಕಾಂಗ್ರೆಸ್ಸಿಗೆ ಸೇರಿದ ವಿಷಯವನ್ನು ಪ್ರಕಟಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ನಾಯ್ಕರ್, ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್.ಎಂ.ಕೃಷ್ಣ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯರಾದ ಸಚ್ಚಿದಾನಂದ ಸ್ವಾಮಿ ಮತ್ತು ಬಿ.ಕೆ.ಹರಿಪ್ರಸಾದ್ ಅವರು ಹಾಜರಿದ್ದು ಚಂದ್ರೇಗೌಡ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.