ದೇಶದಾದ್ಯಂತ ಶೇ 60ಮತದಾನ: ಹಿಂಸೆಗೆ 8 ಬಲಿ
ನವದೆಹಲಿ, ಏ. 27 (ಪಿಟಿಐ)– ಲೋಕಸಭೆಯ 150 ಸ್ಥಾನಗಳಿಗೆ ಹಾಗೂ ಐದು ವಿಧಾನಸಭೆಗಳ 532 ಕ್ಷೇತ್ರಗಳಿಗೆ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ 60ರಷ್ಟು ಮತದಾನವಾಗಿದೆ. ಆಂಧ್ರ, ಹರಿಯಾಣ, ತಮಿಳುನಾಡು, ಅಸ್ಸಾಂ, ಬಿಹಾರಗಳ ಹಲವೆಡೆ ಬಾಂಬ್ ಸ್ಫೋಟ, ಮತಪತ್ರ ಅಪಹರಣ, ಘರ್ಷಣೆಗಳಲ್ಲಿ 8 ಮಂದಿ ಸತ್ತಿದ್ದಾರೆ.
ಪ್ರಧಾನಿ ಪಿ.ವಿ.ನರಸಿಂಹ ರಾವ್ ಸ್ಪರ್ಧಿಸಿರುವ ಆಂಧ್ರದ ನಂದ್ಯಾಲ್ನಲ್ಲಿ ಬಾಂಬ್ ಸ್ಫೋಟ, ಮತಪತ್ರ ಅಪಹರಣ ಪ್ರಕರಣಗಳು ನಡೆದಿವೆ. ಆಂಧ್ರದ ಹಲವೆಡೆ ಘರ್ಷಣೆ, ಗಾಳಿಯಲ್ಲಿ ಗುಂಡು ಹಾರಾಟ ನಡೆದಿದೆ. ಚಿತ್ತೂರು ಮತ್ತು ತಿರುಪತಿ ಕ್ಷೇತ್ರಗಳಲ್ಲಿ ಹಿಂಸಾಚಾರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಹರಿಯಾಣದ ಘರ್ಷಣೆಯಲ್ಲಿ ಒಬ್ಬ ಸತ್ತರೆ,ಬಿಹಾರದಲ್ಲಿ ಸ್ಫೋಟಕ್ಕೆ ಮೂರು ಜನ ಬಲಿಯಾಗಿದ್ದಾರೆ. ಅಸ್ಸಾಂನಲ್ಲಿ ಒಬ್ಬ ಚುನಾವಣಾ ಅಧಿಕಾರಿಯನ್ನು ಕೊಲ್ಲಲಾಗಿದೆ. ತಮಿಳುನಾಡಿನಲ್ಲಿಒಬ್ಬ ಎಂಡಿಎಂಕೆ ಕಾರ್ಯಕರ್ತ ಬಲಿಯಾಗಿದ್ದಾನೆ.
ರಾಜ್ಯದಲ್ಲಿ ಶೇ 56ರಷ್ಟುಮತದಾನ, ಅಲ್ಲಲ್ಲಿ ಘರ್ಷಣೆ
ಬೆಂಗಳೂರು, ಏ. 27– ರಾಜ್ಯದಲ್ಲಿ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ 55ರಿಂದ 56ರಷ್ಟು ಮತದಾನ ಆಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗೈ ಹಾಗೂ ದಳ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ತಲೆಗೆ ಪೆಟ್ಟು ಬಿದ್ದಿರುವ ಒಬ್ಬಾತನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ಗೆ ಸೇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.