ಚರ್ಚೆಗೂ ಮುನ್ನ ಶಸ್ತ್ರ ತ್ಯಜಿಸಲು ಉಗ್ರರಿಗೆ ಪ್ರಧಾನಿ ಕರೆ
ಶ್ರೀನಗರ, ಜುಲೈ 27– ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಏಳು ವರ್ಷ ಗಳಿಂದ ನಡೆಯುತ್ತಿರುವ ಭಯೋತ್ಪಾದನೆ ಯನ್ನು ಕೊನೆಗಾಣಿಸುವ ದಿಸೆಯಲ್ಲಿ ಪ್ರತ್ಯೇಕತಾವಾದಿಗಳ ಜೊತೆ ಯಾವುದೇ ರೀತಿಯ ಮಾತುಕತೆ ಆರಂಭವಾಗಬೇಕಾದರೆ ಅವರು ಮೊದಲು ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಬೇಕೆಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಇಂದು ಇಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕತಾವಾದಿಗಳು ಕುತ್ತಿಗೆಗೆ ಬಂದೂಕನ್ನು ಹಾಕಿಕೊಂಡು ಬಂದರೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ನಾನು ಅವರನ್ನೆಲ್ಲಾ ವಿಶೇಷವಾಗಿ ಯುವಕರನ್ನು ತಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಲು ಮಾತು ಕತೆಗೆ ಆಹ್ವಾನಿಸುತ್ತಿದ್ದೇನೆ ಎಂದರು.
‘ಜಾನಪದ ಹಾಸ್ಯ ಕಥೆಗಳು’ ತಕ್ಷಣ ವಾಪಸ್ಗೆ ಆದೇಶ
ಚಿಕ್ಕಮಗಳೂರು, ಜುಲೈ 27– ರಾಜ್ಯ ಸಂಪ ನ್ಮೂಲ ಕೇಂದ್ರವು ಮುದ್ರಿಸಿ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯ ಗಳಿಗೆ ಪೂರೈಕೆ ಮಾಡಿರುವ ‘ಜಾನಪದ ಹಾಸ್ಯ ಕಥೆಗಳು’ ಪುಸ್ತಕವನ್ನು ತಕ್ಷಣದಿಂದ ವಾಪಸ್ ಪಡೆಯಲು ಆದೇಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಎಚ್.ಜಿ.ಗೋವಿಂದೇಗೌಡ ತಿಳಿಸಿದರು.
ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ಅಶ್ಲೀಲ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಅನಾಥಾಲಯ ಸ್ಥಾಪಿಸುವ ಆಸೆ ವೀರಪ್ಪನ್ಗೆ
ಚೆನ್ನೈ, ಜುಲೈ 27 (ಯುಎನ್ಐ)– ನರ ಹಂತಕ ವೀರಪ್ಪನ್ಗೆ ಈಗ ಅನಾಥಾಲಯ ಸ್ಥಾಪಿಸುವ ಹೆಬ್ಬಯಕೆ.
ಇದಕ್ಕಾಗಿ ಹೊಗೇನಕಲ್ನಲ್ಲಿ 2 ಎಕರೆ ಭೂಮಿ ಮಂಜೂರು ಮಾಡುವಂತೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.