ಭಾರತದ ಪ್ರತಿದಾಳಿ: 50 ಪಾಕ್ ಸೈನಿಕರ ಸಾವು
ಶ್ರೀನಗರ, ಅ. 2– ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತ ನಡೆಸಿದ ಪ್ರತಿದಾಳಿಯಲ್ಲಿ ಊರಿ, ನೌಗಾಮ್ ಮತ್ತು ಕುಪ್ಪಾರ್ ವಿಭಾಗಗಳಲ್ಲಿ ಪಾಕಿಸ್ತಾನದ 50ಕ್ಕೂ ಹೆಚ್ಚು ಸೈನಿಕರು ಸತ್ತಿದ್ದಾರೆ, ಅಲ್ಲದೆ ಹಲವಾರು ಸೈನಿಕರು ಗಾಯಗೊಂಡಿದ್ದಾರೆ.
ಭಾರತದ ಈ ದಾಳಿಯಿಂದ ಪಾಕಿಸ್ತಾನದ 125 ಸೇನಾ ನೆಲೆಗಳು ನಾಶವಾಗಿದ್ದು, ಕೆಲವೆಡೆ ಶಸ್ತ್ರ ಸಂಗ್ರಹಗಳಿಗೆ ಹಾನಿ ಉಂಟಾಗಿದೆ ಎಂದು ಬ್ರಿಗೇಡಿಯರ್ ಅಶೋಕ್ ಕಪೂರ್ ಅವರು ಇಂದು ಸಂಜೆ ಸುದ್ದಿಗಾರರಿಗೆ ತಿಳಿಸಿದರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಾಗಿಸಲು ಪಾಕಿಸ್ತಾನದ ಸೇನಾ ನೆಲೆಗಳಲ್ಲಿ ಬಿಳಿ ಧ್ವಜಗಳನ್ನು ಹಾರಿಸಲಾಗುತ್ತಿದೆ ಎಂದರು.
ದಸರಾ ಆರಂಭ: ಸಾಂಸ್ಕೃತಿಕ ಆಕ್ರಮಣಕ್ಕೆ ವಿಷಾದ
ಮೈಸೂರು, ಅ. 2–ಜನತೆಯನ್ನು ಕೇಂದ್ರ ಮಾಡಿಕೊಳ್ಳದ ರಾಜಕಾರಣ, ಸಾರ್ವ
ತ್ರಿಕವಾಗಿ ನೆಲೆಯೂರಿರುವ ಭ್ರಷ್ಟಾಚಾರ, ಸರ್ವೋದಯ ವಿರೋಧಿಯಾದ ಅನೇಕ ಪಿಡುಗುಗಳು, ಪರಿಸರ ನಾಶದ ತಲ್ಲಣಗಳು ಪ್ರಜ್ಞಾವಂತರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಿವೆ ಎಂದು ಕನ್ನಡದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಇಂದು ಇಲ್ಲಿ ವಿಷಾದಿಸಿದರು.
ಚಾಮುಂಡಿ ಬೆಟ್ಟದಲ್ಲಿ ಹತ್ತು ದಿನಗಳ ದಸರಾ ಮಹೋತ್ಸವವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದ ಜಿಎಸ್ಎಸ್ ಅವರು, ಈ ಅಸ್ವಸ್ಥ ವಾತಾವರಣದಿಂದ ಹೊರಬರಲು ಅಂತರ್ ನಿರೀಕ್ಷಣೆ ಮತ್ತು ದೃಢಸಂಕಲ್ಪ ಅಗತ್ಯವಿರುವುದನ್ನು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.